ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟಿಯ ಮಲಯ ಮಾರುತ ಸಮೀಪದ ಪ್ರಪಾತದಲ್ಲಿ ಬೆಂಗಳೂರಿನ ಮತ್ತಿಕೆರೆಯ ಕಾಲೊನಿ ನಿವಾಸಿ ಗೋವಿಂದರಾಜು (19) ಶವ ಪತ್ತೆಯಾಗಿದೆ. ಆತನನ್ನು ಕೊಲೆ ಮಾಡಿ ಇಲ್ಲಿ ಎಸೆದಿರಬಹುದು ಎಂದು ಶಂಕಿಸಲಾಗಿದೆ.
ಪೇಟಿಂಗ್ ಕೆಲಸಗಾರ ಗೋವಿಂದರಾಜು ಜ.30ರಂದು ಮನೆಯಿಂದ ಕಾಣೆಯಾಗಿದ್ದರು. ಅವರು ರಾಜು ಮತ್ತು ಗಂಗಮ್ಮ ದಂಪತಿಯ ಪುತ್ರ.
ಯಶವಂತಪುರ ಠಾಣೆ ಪಿಎಸ್ಐ ಮಹೇಶ್ ಮತ್ತು ತಂಡ ಚಾರ್ಮಾಡಿ ಪ್ರದೇಶದಲ್ಲಿ ಸ್ಥಳೀಯರ ನೆರವಿನೊಂದಿಗೆ ಬುಧವಾರ ಬೆಳಿಗ್ಗೆ ಶೋಧ ನಡೆಸಿದರು. ಪ್ರಪಾತದಲ್ಲಿ ಸುಮಾರು 400 ಅಡಿ ಆಳದಲ್ಲಿದ್ದ ಶವವನ್ನು ಹಗ್ಗಕಟ್ಟಿ ಮೇಲಕ್ಕೆ ತರಲಾಯಿತು.
ಹುಡುಗಿ ವಿಚಾರ: ‘ಹುಡುಗಿಯ ವಿಚಾರದಲ್ಲಿ ಮಾತನಾಡುವುದಿದೆ ಎಂದು ಅನಿಲ್ ಎಂಬುವರು ಗೋವಿಂದರಾಜು ಅವರನ್ನು ಜ.30ರಂದು ಬೆಳಿಗ್ಗೆ 11.30ರ ಹೊತ್ತಿನಲ್ಲಿ ಕರೆದೊಯ್ದಿದ್ದಾಗಿ ನಮ್ಮ ಚಿಕ್ಕಮ್ಮ ನಾಗರತ್ನ ತಿಳಿಸಿದರು. ಗೋವಿಂದರಾಜು ಮನೆಗೆ ವಾಪಸ್ ಬಂದಿಲ್ಲ, ಹುಡುಕಿಕೊಡಿ’ ಎಂದು ತಾಯಿ ಗಂಗಮ್ಮ ಅವರು ಯಶವಂತಪುರ ಠಾಣೆಯಲ್ಲಿ ದೂರು ನೀಡಿದ್ದರು.
ಪೊಲೀಸರು ಅನಿಲ್ನನ್ನು ವಿಚಾರಣೆ ಮಾಡಿ, ಸುಳಿವು ಆಧರಿಸಿ ಚಾರ್ಮಾಡಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಆರೋಪಿಯನ್ನೂ ಜೊತೆಗೆ ಕರೆತಂದಿದ್ದರು.
‘ಗೋವಿಂದರಾಜು ಶವ ಸಿಕ್ಕಿದೆ. ಮರಣೋತ್ತರ ಪರೀಕ್ಷೆಗೆ ಬೆಂಗಳೂರಿಗೆ ಸಾಗಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ’ ಎಂದು ಯಶವಂತಪುರ ಪಿಎಸ್ಐ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.