ADVERTISEMENT

ಬಿದರಹಳ್ಳಿ ಸುತ್ತಮುತ್ತ ಕಾಡಾನೆ ದಾಳಿ

​ಪ್ರಜಾವಾಣಿ ವಾರ್ತೆ
Published 25 ಮೇ 2019, 11:58 IST
Last Updated 25 ಮೇ 2019, 11:58 IST
ಮೂಡಿಗೆರೆ ತಾಲ್ಲೂಕಿನ ಬಿದರಹಳ್ಳಿ ಗ್ರಾಮದ ಬಿ.ಡಿ. ಜಗನ್ನಾಥ್ ಎಂಬುವರರ ಕಾಫಿ ತೋಟಕ್ಕೆ ಶನಿವಾರ ಮುಂಜಾನೆ ದಾಳಿ ನಡೆಸಿರುವ ಕಾಡಾನೆ ತೆಂಗಿನ ಮರವನ್ನು ಧರೆಗುರುಳಿಸಿದೆ.
ಮೂಡಿಗೆರೆ ತಾಲ್ಲೂಕಿನ ಬಿದರಹಳ್ಳಿ ಗ್ರಾಮದ ಬಿ.ಡಿ. ಜಗನ್ನಾಥ್ ಎಂಬುವರರ ಕಾಫಿ ತೋಟಕ್ಕೆ ಶನಿವಾರ ಮುಂಜಾನೆ ದಾಳಿ ನಡೆಸಿರುವ ಕಾಡಾನೆ ತೆಂಗಿನ ಮರವನ್ನು ಧರೆಗುರುಳಿಸಿದೆ.   

ಮೂಡಿಗೆರೆ: ತಾಲ್ಲೂಕಿನ ಬಿದರಹಳ್ಳಿ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆಯನ್ನು ನಾಶಗೊಳಿಸಿವೆ.

ನಾಲ್ಕೈದು ದಿನದಿಂದ ಹೊರಟ್ಟಿ, ಕೆಂಜಿಗೆ, ಖತ್ಲೆಖಾನ್ ಅರಣ್ಯ ಪ್ರದೇಶಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ ಎನ್ನಲಾಗುತಿತ್ತು. ಅದೇ ಕಾಡಾನೆಗಳು ಶನಿವಾರ ಮುಂಜಾನೆ ಬಿದರಹಳ್ಳಿ, ಬಸವನಹಳ್ಳಿ, ಲೋಕವಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ದಾಳಿ ನಡೆಸಿದ್ದು, ಕಾಫಿ ತೋಟದಲ್ಲಿ ತಿರುಗಾಡಿ ಕಾಫಿ ಗಿಡಗಳನ್ನು ನಾಶಗೊಳಿಸಿವೆ. ಅಲ್ಲದೇ ಕಾಫಿ ತೋಟದಲ್ಲಿ ಬೆಳೆದು ನಿಂತಿರುವ ಅಡಿಕೆ, ತೆಂಗು, ಬೈನೆ ಮರಗಳನ್ನು ಉರುಳಿಸಿರುವುದರಿಂದ ಕಾಫಿ ಗಿಡಗಳು ನಾಶಗೊಳಿಸಿವೆ.

‘ಕೆಂಜಿಗೆ ಭಾಗದಿಂದ ಬಂದಿರಬಹುದು ಎಂದು ಶಂಕಿಸಲಾಗಿರುವ ಕಾಡಾನೆಯು, ಬಿ.ಡಿ. ಜಗನ್ನಾಥ್ ಎಂಬುವವರ ಕಾಫಿ ತೋಟಕ್ಕೆ ದಾಳಿ ಮಾಡಿ, ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದ ತೆಂಗಿನ ಮರವನ್ನು ಧರೆಗುರುಳಿಸಿದೆ. ಅಲ್ಲದೇ ಕಾಫಿ ತೋಟದೊಳಗೆ ತಿರುಗಾಡಿರುವುದರಿಂದ 50ಕ್ಕೂ ಅಧಿಕ ಕಾಫಿ ಗಿಡಗಳು ನೆಲಸಮಗೊಂಡಿವೆ. ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದಾಗ ಒಂದು ಕಾಡಾನೆ ದಾಳಿ ನಡೆಸಿರಬಹುದು’ ಎಂದು ಸ್ಥಳೀಯರು ಶಂಕಿಸಿದ್ದು, ಬಸವನಹಳ್ಳಿಯಲ್ಲಿ ಮೂರ್ನಾಲ್ಕು ಕಾಡಾನೆಗಳು ತಿರುಗಾಡಿರುವ ಹೆಜ್ಜೆ ಗುರುತು ಕಂಡು ಬಂದಿದೆ ಎಂದು ಸ್ಥಳೀಯರು ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

ಒಂಟಿ ಸಲಗದ ಭೀತಿ: ತಾಲ್ಲೂಕಿನಲ್ಲಿ ಹಲವು ಜೀವಗಳನ್ನು ಬಲಿ ಪಡೆದಿರುವ ಒಂಟಿ ಸಲಗವೇ ದಾಳಿ ನಡೆಸುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದ್ದು, ಕಾಫಿ ತೋಟಗಳಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಅಲ್ಲದೇ ಕಾಡಾನೆ ದಾಳಿ ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿ ಸಂಚರಿಸಲು ಜನರು ಭೀತರಾಗಿದ್ದು, ಕೂಡಲೇ ಅರಣ್ಯ ಇಲಾಖೆಯು ಕಾಡಾನೆಯನ್ನು ಸ್ಥಳಾಂತರಿಸಲು ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.