ಶೃಂಗೇರಿ: ‘ಅರಣ್ಯ ಉಳಿಸಲು ಪ್ರಾಮಾಣಿಕ ಪ್ರಯತ್ನ ಅಗತ್ಯವಾಗಿದ್ದು, ಅರಣ್ಯ ಸಂರಕ್ಷಣೆಗೆ ಕಾನೂನು ಇದ್ದರೂ ಅರಣ್ಯ ನಾಶ ಮುಂದುವರೆದಿದೆ’ ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಜೀತು ಆರ್.ಎಸ್ ವಿಷಾದ ವ್ಯಕ್ತಪಡಿಸಿದರು.
ಶೃಂಗೇರಿಯ ಜೆ.ಸಿ.ಬಿ.ಎಂ ಕಾಲೇಜಿನಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ಆಯೋಜಿಸಿದ ‘ಅರಣ್ಯ ಸಂರಕ್ಷಣೆಯ ಕಾನೂನು ಅರಿವು–ನೆರವು ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
ಪಟ್ಟಣ, ನಗರ ಬೆಳೆಯುತ್ತಿದ್ದಂತೆ ಸುತ್ತಲಿನ ಅರಣ್ಯ ನಾಶವಾಗುತ್ತಿದೆ. ಕೈಗಾರಿಕೆ ವಿಸ್ತರಣೆ, ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ನಿರಂತರವಾಗಿ ನಡೆಯುತ್ತಿದೆ. ಅರಣ್ಯ ನಾಶಕ್ಕೆ ಸರಿಯಾಗಿ ಗಿಡ ನೆಡುವ ಕಾರ್ಯಕ್ರಮವಾಗದೆ ಅರಣ್ಯ ಬೆಳವಣಿಗೆ ಕುಂಠಿತವಾಗಿದೆ ಎಂದರು.
ಅರಣ್ಯ ಕಾಯ್ದೆ ಬಗ್ಗೆ ವಕೀಲ ಕೆ.ಆರ್ಸುರೇಶ್ ಮಾತನಾಡಿ, ‘ಅರಣ್ಯ ಕಾಯ್ದೆ ಪ್ರಬಲವಾಗಿದ್ದು, ಅಕ್ರಮ ಕಾಡು ಕಡಿತ ತಪ್ಪಿಸಲು ಕಾನೂನು ಇದೆ. ರೈತರು ತಮ್ಮ ಜಮೀನಿನಲ್ಲಿರುವ ಕಾಡು ಮರ ಕಡಿಯಲು ಇಲಾಖೆ ಅನುಮತಿ ಪಡೆಯುವುದು ಅಗತ್ಯ’ ಎಂದರು.
ಪ್ರಾಧ್ಯಾಪಕ ವಿದ್ಯಾಧರ್ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಮಹೇಶ್, ಕಾಲೇಜಿನ ಪಿ.ಯು ವಿಭಾಗದ ಪ್ರಾಂಶುಪಾಲ ಎ.ಜಿ ಪ್ರಶಾಂತ್, ಸಂತೋಷ್ ಕುಮಾರ್, ವಲಯ ಅರಣ್ಯಾಧಿಕಾರಿ ಮಧುಕರ್, ಶೃತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.