ADVERTISEMENT

ಶೃಂಗೇರಿ | ಮಳೆ ಬಿರುಸು; ತುಂಗೆಯ ಹರಿವು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 14:46 IST
Last Updated 15 ಜೂನ್ 2025, 14:46 IST
<div class="paragraphs"><p>ಶೃಂಗೇರಿ ತಾಲ್ಲೂಕಿನಲ್ಲಿ ಮಳೆಯಿಂದ ತುಂಗಾನದಿಯ ನೀರಿನ ಮಟ್ಟ ಎರಿಕೆಯಾಗಿರುವುದು</p></div>

ಶೃಂಗೇರಿ ತಾಲ್ಲೂಕಿನಲ್ಲಿ ಮಳೆಯಿಂದ ತುಂಗಾನದಿಯ ನೀರಿನ ಮಟ್ಟ ಎರಿಕೆಯಾಗಿರುವುದು

   

ಶೃಂಗೇರಿ: ಶನಿವಾರ ರಾತ್ರಿಯಿಂದ ಮಳೆಯ ಆರ್ಭಟ ಹೆಚ್ಚಾಗಿದ್ದು, ಭಾನುವಾರ ತುಂಗಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಶೃಂಗೇರಿ ಸುತ್ತಮುತ್ತಲಿನ ಕೆಲವು ಪ್ರದೇಶಗಳು ಜಲಾವೃತವಾಗಿವೆ.

ತಾಲ್ಲೂಕಿನಲ್ಲಿ ಇದುವರೆಗೆ 1071.2 ಮಿ.ಮೀ ಮಳೆಯಾಗಿದ್ದು, ಶೃಂಗೇರಿಯಲ್ಲಿ 47.2 ಮಿ.ಮೀ, ಕಿಗ್ಗಾದಲ್ಲಿ 63 ಮಿ.ಮೀ, ಕೆರೆಕಟ್ಟೆಯಲ್ಲಿ 123 ಮಿ.ಮೀ ಮಳೆಯಾಗಿದೆ.

ADVERTISEMENT

ಶೃಂಗೇರಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ರ ನೆಮ್ಮಾರ್‌ನ ಸಾಲುಮರ ಸಮೀಪ ಧರೆ ಕುಸಿದು ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ಮಣ್ಣು ತೆರವುಗೊಳಿಸಲಾಗಿದೆ. ಆಗಾಗ ಮಣ್ಣು ಕುಸಿಯುವುದರಿಂದ ಸಂಜೆ 5.30ರಿಂದ ಬೆಳಿಗ್ಗೆ 8ರವರೆಗೆ ವಾಹನ ಸಂಚಾರವನ್ನು ತಹಶೀಲ್ದಾರ್ ನಿರ್ಬಂಧಿಸಿದ್ದಾರೆ.

ನಿರಂತರ ಮಳೆಯಿಂದ ಹಲವು ಕಡೆ ನೀರು ತುಂಬಿದ್ದು, ಗ್ರಾಮೀಣ ಭಾಗದ ರಸ್ತೆಗಳು, ಹಳ್ಳಕೊಳ್ಳಗಳು, ಭತ್ತದ ಗದ್ದೆಗಳು, ತೋಟಗಳು ನೀರಿನಿಂದ ಆವೃತ್ತಗೊಂಡಿವೆ. ತಾಲ್ಲೂಕಿನ ಕೆರೆ ಗ್ರಾಮ ಪಂಚಾಯಿತಿಯ ಶಿರ್ಲು, ಹಾದಿ, ಕೆರೆ, ಸುಂಕದಮಕ್ಕಿ, ನಿಲಂದೂರು, ಕುಂಬ್ರಗೋಡು, ಕೂಗೋಡು ಗ್ರಾಮಗಳ ನಿವಾಸಿಗಳು ಆಸ್ಪತ್ರೆಗೆ ಬರಲು ತೊಂದರೆ ಅನುಭವಿಸುವಂತಾಗಿದೆ.

ಭಾರಿ ಮಳೆಯಿಂದಾಗಿ ಶೃಂಗೇರಿ ಪಟ್ಟಣದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.

ನಿಯಂತ್ರಣ ಕೊಠಡಿ ಸಂಪರ್ಕಿಸಿ

ಮಳೆ ಜಾಸ್ತಿಯಾಗುತ್ತಿದ್ದು, ಜನ ಭಯಪಡುಬೇಕಿಲ್ಲ. ಪಿಎಸ್‌ಐ ಅಭಿಷೇಕ್, ಅಗ್ನಿ ಶಾಮಕ ಸಿಬ್ಬಂದಿ, ಕಂದಾಯ ಇಲಾಖೆಯವರು ತಾಲ್ಲೂಕಿನಲ್ಲಿ ನಿಗಾ ವಹಿಸಿದ್ದಾರೆ. ಜನರು ಸಹಕಾರ ನೀಡಬೇಕು. ಯಾವುದೇ ಅನಾಹುತ ಉಂಟಾದರೆ ನಿಯಂತ್ರಣ ಕೊಠಡಿ ದೂರವಾಣಿ 08265-250135ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಇಲಾಖೆ ಕೂಡಲೇ ಸ್ಪಂದಿಸಲಿದೆ ಎಂದು ತಹಶೀಲ್ದಾರ್ ಅನೂಪ್ ಸಂಜೋಗ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿರುಸಿನ ಮಳೆ

ಕೊಪ್ಪ: ಪಟ್ಟಣವೂ ಸೇರಿದಂತೆ ತಾಲ್ಲೂಕಿನಲ್ಲಿ ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಬಿರುಸಿನ ಮಳೆಯಾಗಿದೆ.
ಶನಿವಾರ ರಾತ್ರಿಯೂ ವೇಳೆ ಮಳೆಯಾಗಿತ್ತು. ಗಾಳಿ, ಮಳೆಗೆ ಗ್ರಾಮೀಣ ಭಾಗದಲ್ಲಿ ಕೆಲವೆಡೆ ವಿದ್ಯುತ್ ವ್ಯತ್ಯಯವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.