ನರಸಿಂಹರಾಜಪುರ: ‘ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ದುಶ್ಚಟಗಳಿಗೆ ದಾಸರಾಗದೆ ಕಲಿಕೆಯೆಡೆ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದು ತಹಶೀಲ್ದಾರ್ ತನುಜಾ ಟಿ. ಸವದತ್ತಿ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆತಂರಿಕ ಗುಣಮಟ್ಟ ಭರವಸೆ ಕೋಶ, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಆರ್ಥಿಕ ಸಾಕ್ಷರತಾ ಕಾರ್ಯಕ್ರಮದ ಸಹಯೋಗದಲ್ಲಿ ಡಾ.ಮಹಂತ ಶಿವಯೋಗಿ ಅವರ ಜನ್ಮದಿನದ ಅಂಗವಾಗಿ ನಡೆದ ವ್ಯಸನಮುಕ್ತ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
18ರಿಂದ 21 ವರ್ಷ ವಯಸ್ಸು ಪದವಿ ಹಂತದ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುವ ಹಂತವಾಗಿದೆ. ಈ ಹಂತದಲ್ಲಿ ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಬಲಿಯಾದರೆ ಅಮೂಲ್ಯ ಜೀವನ ಹಾಳಾಗುತ್ತದೆ. ಮೊಬೈಲ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಉತ್ತಮ ಪುಸ್ತಕಗಳನ್ನು ಓದುವತ್ತ ಗಮನಹರಿಸಿ. ಉತ್ತಮ ಚಿಂತನೆಗಳನ್ನು ಬೆಳೆಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ. ಪೋಷಕರು, ಗುರುಹಿರಿಯರಿಗೆ ಗೌರವ ತರುವ ಕೆಲಸ ಮಾಡಿ ಉತ್ತಮ ಪ್ರಜೆಗಳಾಗಿ ಬಾಳಿ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಧನಂಜಯ ಮಾತನಾಡಿ, ಮಹಂತ ಶಿವಯೋಗಿಗಳು ಯುವ ಶಕ್ತಿ ವ್ಯಸನಗಳಿಂದ ಮುಕ್ತರಾಗಬೇಕೆಂದು ಆಶಿಸಿದ್ದರು. ಅವರ ಜನ್ಮದಿನಾಚರಣೆಯನ್ನು ವ್ಯಸನ ಮುಕ್ತ ದಿನವನ್ನಾಗಿ ಆಚರಿಸಲಾಗುತ್ತಿದೆ. ವ್ಯಸನಗಳು ಎಂದರೆ ಮದ್ಯಪಾನ, ಧೂಮಪಾನ, ಗಾಂಜಾ, ಮಾದಕ ವಸ್ತು ಸೇವನೆ ಮಾಡುವುದು ಮಾತ್ರವಲ್ಲ. ಜೀವನಕ್ಕೆ ಹಾನಿಕಾರವಾಗುವ ಎಲ್ಲಾ ವಿಷಯ ವ್ಯಸನವಾಗುತ್ತವೆ. ನಿರ್ದಿಷ್ಟ ಗುರಿ ಇಲ್ಲದಿರುವುದು, ಅತಿಯಾದ ಮೊಬೈಲ್ ಬಳಕೆ, ಸೋಮಾರಿತನ, ಸಮಯಪಾಲನೆ ಮಾಡದಿರುವುದು, ನಿರ್ಲಕ್ಷ್ಯ ಮನೋಭಾವ, ಜ್ಞಾನ ಪಡೆಯಲು ಅಡ್ಡಿಯಾಗುವ ಅಂಶಗಳು ಸಹ ವ್ಯಸನ. ಅತಹವುಗಳನ್ನು ಹಿಮ್ಮೆಟ್ಟಿ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ದೌರ್ಬಲ್ಯಗಳನ್ನು ಅರಿತು, ಅದನ್ನು ಮೆಟ್ಟಿನಿಂತು ಕಠಿಣ ಶ್ರಮದಿಂದ ವ್ಯಾಸಂಗದಲ್ಲಿ ತೊಡಗಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಆರ್ಥಿಕ ಸಾಕ್ಷರತಾ ಪ್ರಸಾರಕಿ ಸುನಿತಾ ಅವರು ಬ್ಯಾಂಕ್ನ ವಿವಿಧ ಖಾತೆಗಳು, ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಜನಧನ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಪ್ರಸಾದ್, ಕನ್ನಡ ವಿಭಾಗ ಮುಖ್ಯಸ್ಥೆ ಜಿ. ಸವಿತಾ, ಸಮಾಜಕಾರ್ಯ ವಿಭಾಗದ ಸಹ ಪ್ರಾಧ್ಯಾಪಕ ಅಶೋಕ್ ಕುಮಾರ್, ವಿದ್ಯಾರ್ಥಿಗಳಾದ ಸ್ಫೂರ್ತಿ, ಗಾನವಿ, ರತ್ನ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.