ಕಡೂರು: ‘ಬಲಿಷ್ಠ ಸಮಾಜವನ್ನು ನಿರ್ಮಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು’ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ವಿಭಾಗದ ನಿರ್ದೇಶಕಿ ಗೀತಾ ತಿಳಿಸಿದರು.
ಯಗಟಿಪುರದ ಶ್ರೀಮಲ್ಲಿಕಾರ್ಜುನ ಸ್ವಾಮಿ ಸಮುದಾಯ ಭವನದಲ್ಲಿ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಅಜ್ಜಂಪುರ ತಾಲ್ಲೂಕು ಮತ್ತು ಯಗಟಿ ವಲಯದ ವತಿಯಿಂದ ನಡೆದ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಆರ್ಥಿಕ ಮತ್ತು ಶೈಕ್ಷಣಿಕ ಬೆಳವಣಿಗೆಯಲ್ಲಿಯೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಸಮಸ್ಯೆ, ಹಿಂಜರಿಕೆಯನ್ನು ಮೆಟ್ಟಿನಿಲ್ಲುವ ಧೈರ್ಯ ತೋರಿದರೆ ಯಶಸ್ಸು ಮಹಿಳೆಯ ಪಾಲಾಗುತ್ತದೆ. ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡು, ಮನೆಯವರ ಪ್ರೀತಿ ಮತ್ತು ಸಹಕಾರ ಪಡೆದು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಮುನ್ನುಡಿಯಾಗುವ ಭರವಸೆ ಎಲ್ಲರಲ್ಲಿ ಇರಲಿ ಎಂದರು.
ಯಗಟಿ ಠಾಣೆಯ ಪಿಎಸ್ಐ ಮಂಜುನಾಥ್ ಮಾತನಾಡಿ, ‘ಹೆಣ್ಣಿನ ಪ್ರಗತಿಯೇ ರಾಜ್ಯ ಮತ್ತು ದೇಶದ ಶಕ್ತಿ ಎಂದು ಬಣ್ಣಿಸಿದ ಅವರು, ಮಹಿಳೆಯರು ಬಾಲ್ಯ ವಿವಾಹ ನಿಷೇಧ, ಹೆಣ್ಣುಮಕ್ಕಳ ದುರ್ಬಳಕೆ, ಭದ್ರತೆಯ ಬಗ್ಗೆ ಎಚ್ಚರದಿಂದ ಇರಬೇಕು’ ಎಂದು ಸಲಹೆ ನೀಡಿದರು.
ಸಮುದಾಯ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಟಿ.ಎಸ್. ಅಕ್ಷಿತಾ ಅವರು, ಆಧುನಿಕತೆಯಲ್ಲಿ ಆಹಾರ ಪದ್ಧತಿಗಳ ಕುರಿತು ಮಾಹಿತಿ ನೀಡಿದರು. ಜಿ.ಕೆ. ಶಾರದಾ ಅಧ್ಯಕ್ಷತೆ ವಹಿಸಿದ್ದರು. ಅಜ್ಜಂಪುರ ತಾಲ್ಲೂಕು ಯೋಜನಾಧಿಕಾರಿ ಸಂಜೀವ ಗೌಡ, ಕೊರಗಪ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಕವಿತಾ, ಜನಜಾಗೃತಿ ಸದಸ್ಯ ಶಿವಲಿಂಗಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.