ಕಳಸ: ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಕೆ. ಮೇಗಲ್ ಗ್ರಾಮದ ಕೊಣೆಗೋಡು ಹರಿಜನ ಕಾಲೊನಿಗೆ ಸಂಪರ್ಕ ರಸ್ತೆ ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಗ್ರಾಮದ ಯುವಕ ಅವಿನಾಶ್ ಎಂಬುವರು ಶುಕ್ರವಾರ ಮೃತಪಟ್ಟರು. ಅಂತ್ಯಸಂಸ್ಕಾರಕ್ಕಾಗಿ ಅವರ ಮೃತದೇಹವನ್ನು ಕಾಲೊನಿಯ ಮನೆಗೆ ತರಲು ರಸ್ತೆ ಇಲ್ಲದ ಕಾರಣ ಸಂಬಂಧಿಕರು ಬಡಿಗೆಗೆ ಕಟ್ಟಿಕೊಂಡು ಹೊತ್ತು ತಂದರು.
ಅವಿನಾಶ್ ಅವರನ್ನು ಗುರುವಾರ ಬೆನ್ನಿನ ಮೇಲೆ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಲೊನಿಗೆ ರಸ್ತೆ ಇಲ್ಲದ ಕಾರಣ, ಬಡಿಗೆಗೆ ಕಟ್ಟಿ ಮೃತದೇಹ ತರಬೇಕಾಯಿತು ಎಂದು ಗ್ರಾಮಸ್ಥರು ಹೇಳಿದರು.
‘ನಮ್ಮೂರಿಗೆ ಕನಿಷ್ಠ ರಸ್ತೆ ಸೌಲಭ್ಯವೂ ಇಲ್ಲ ಎನ್ನುವುದು ಬೇಸರದ ವಿಷಯ. ಮಳೆಗಾಲದಲ್ಲಿ ಹಳ್ಳ ರಭಸವಾಗಿ ಹರಿಯುವುದರಿಂದ ಗ್ರಾಮದ ಸಂಪರ್ಕ ಕಡಿದು ಹೋಗುತ್ತದೆ. ರಸ್ತೆ, ಸೇತುವೆಗಾಗಿ ಹಲವು ವರ್ಷಗಳಿಂದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ, ನಮ್ಮ ಬಗ್ಗೆ ಯಾರಿಗೂ ಕನಿಕರ ಇಲ್ಲ’ ಎಂದು ಗ್ರಾಮದ ಮಹಿಳೆ ಗಿರಿಜಾ ನೋವಿನಿಂದ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.