ಅಜ್ಜಂಪುರ: ‘ಕನ್ನಡ ಭಾಷೆಯನ್ನು ಪ್ರೀತಿಸಿ, ಇತರ ಭಾಷೆಯನ್ನು ಗೌರವಿಸಿ’ ಎಂದು ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ ಕರೆ ನೀಡಿದರು.
ತಾಲ್ಲೂಕು ಆಡಳಿತ ವತಿಯಿಂದ ಪಟ್ಟಣದ ಶೆಟ್ರು ಸಿದ್ದಪ್ಪ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.
‘ಅನೇಕ ಮಹನೀಯರು ಏಕೀಕೃತ ಕರ್ನಾಟಕಕ್ಕಾಗಿ ದುಡಿದಿದ್ದಾರೆ. ಅವರು ಸಮರ್ಥಿಸಿದ, ಪ್ರತಿಪಾದಿಸಿದ, ಸಂಘಟಿಸಿದ ಕರ್ನಾಟಕದ ಉಜ್ವಲ ಇತಿಹಾಸ, ಪರಂಪರೆ, ಸಂಸ್ಕೃತಿ ಉಳಿಸುವ, ಬೆಳೆಸುವ ಹೊಣೆಗಾರಿಕೆ ಎಲ್ಲರ ಮೇಲಿದೆ’ ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ಭಾಷಾ ವಿಷಯದಲ್ಲಿ 125 ಅಂಕ ಗಳಿಸಿದ ತಾಲ್ಲೂಕಿನ 30 ವಿದ್ಯಾರ್ಥಿಗಳಿಗೆ ತಾಲ್ಲೂಕು ಆಡಳಿತ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಾಲಿಬಾಲ್ನಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಗಡೀಹಳ್ಳಿ ಶಾಲಾ ವಿದ್ಯಾರ್ಥಿ ‘ಹೊಯ್ಸಳ’ ಮತ್ತು ಅಂತರರಾಷ್ಟ್ರೀಯ ಮಟ್ಟದ ಯುವ ಕಬಡ್ಡಿ ಕ್ರೀಡಾ ಚಾಂಪಿಯನ್ ಷಿಪ್-2022ಗೆ ಆಯ್ಕೆಯಾದ ಎಸ್.ದಿಲೀಪ್ ಅವರನ್ನು ಸನ್ಮಾನಿಸಲಾಯಿತು.
ಪಥ ಸಂಚಲನ ವಿಭಾಗದಲ್ಲಿ ವಾಸವಿ ಸುಬ್ರಹ್ಮಣ್ಯ ಶ್ರೇಷ್ಠಿ ಸಂಯುಕ್ತ ಶಾಲೆ ಪ್ರಥಮ ಮತ್ತು ಕನ್ನಡ ನೂತನ ಶಾಲಾ ತಂಡ ದ್ವಿತೀಯ ಸ್ಥಾನ ಪಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ವಿವಿಧ ಶಾಲೆಯ ಎಂಟು ತಂಡಗಳಿಗೆ ಬಹುಮಾನ ನೀಡಲಾಯಿತು. ವಾಸವಿ ಮತ್ತು ವಿದ್ಯಾ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳು ಛದ್ಮವೇಷ ಧರಿಸಿ ಗಮನ ಸೆಳೆದರು. ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ್ ಹರ್ತಿ, ಪಟ್ಟಣ ಪಂಚಾ ಯಿತಿ ಮುಖ್ಯಾಧಿಕಾರಿ ನಾಗರತ್ನಾ, ಉಪತಹಶೀಲ್ದಾರ್ ನೇತ್ರಾವತಿ, ಶಿರಸ್ತೇದಾರ ರಮೇಶ್, ಸರ್ಕಾರಿ ನೌಕರ ಸಂಘದ ತಾಲ್ಲೂಕು ಅಧ್ಯಕ್ಷ ಈಶ್ವರಪ್ಪ, ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಶಿವಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜಣ್ಣ, ನಿವೃತ್ತ ಅಧಿಕಾರಿ ಎಚ್. ಪುಟ್ಟಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.