ಚಿಕ್ಕಮಗಳೂರು: ಅಯ್ಯನಕೆರೆ ಕೋಡಿಬಿದ್ದು ಹರಿಯುವ ನೀರಿನಿಂದ ಕೆರೆಗಳನ್ನು ತುಂಬಿಸುವ ಕಾಮಗಾರಿ ಸ್ಥಗಿತಗೊಳಿಸಿ ಯಥಾಸ್ಥಿತಿ ಕಾಪಾಡಬೇಕು ಎಂದು ಮುಖಂಡ ಲೋಕೇಶ್ ಹೇಳಿದರು.
‘ಸಖರಾಯಪಟ್ಟಣ ಹೋಬಳಿಯ ಅಗ್ರಹಾರದ ಬಳಿ ಇರುವ ಚೆಕ್ಡ್ಯಾಂನಿಂದ ನಾಗೇನಹಳ್ಳಿ ಮತ್ತು ಹುಲಿಕೆರೆ ಸಮೀಪದ ಬೆರಟಿಕೆರೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆ ಬಗ್ಗೆ ಅಧಿಕಾರಿಗಳು ಎರಡು ಭಾಗದ ರೈತರಿಗೆ ಸರಿಯಾದ ಮಾಹಿತಿ ನೀಡಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಡಿಪಿಆರ್ನಲ್ಲಿ 200 ಎಚ್ಪಿ ಎರಡು ಮೋಟರ್, ಒಂದು ಮೈನ್ ಇನ್ನೊಂದು ಸ್ಟ್ಯಾಂಡ್ ಬೈ ಎಂಬ ಉಲ್ಲೇಖವಿದೆ. ಕೆರೆಯಿಂದ ಕೂಡಿ ಬಿದ್ದು ಹರಿಯುವ ನೀರಿನಿಂದ ಕೆರೆಗಳನ್ನು ತುಂಬಿಸುವ ಯೋಜನೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಅಯ್ಯನಕೆರೆಯಿಂದ ಕೂಡಿಬಿದ್ದ ನೀರು ವೇದಾನದಿಗೆ ಬರುವುದೇ ಇಲ್ಲ ಎಂದರು.
ಡಿಪಿಆರ್ನಲ್ಲಿ ಇರುವಂತೆ ಅಯ್ಯನಕೆರೆಯಿಂದ ಕೋಡಿಬಿದ್ದ ನೀರು 3,500 ಕ್ಯೂಸೆಕ್ ಹರಿಯುತ್ತದೆ ಎಂದು ನಮೂದಿಸಿದ್ದಾರೆ. ಪ್ರತಿ ಸೆಕೆಂಡಿಗೆ ಅಷ್ಟು ನೀರು ಹರಿಯುತ್ತದೆ ಎಂದಲ್ಲ. ಶುದ್ಧ ಸುಳ್ಳು ಮತ್ತು ಅವೈಜ್ಞಾನಿಕ ಮಾಹಿತಿಯನ್ನು ಕೆಲವರು ನೀಡುತ್ತಿದ್ದಾರೆ ಎಂದು ದೂರಿದರು.
ಅಧಿಕಾರಿಗಳು ತಮ್ಮ ಯೋಜನೆಗೆ ಬೇಕಾದಷ್ಟು ಸಮೀಕ್ಷೆ ಮಾಡಿದ್ದಾರೆಯೇ ಹೊರತು ಕೆಳಭಾಗದ ನೂರಕ್ಕೂ ಅಧಿಕ ಹಳ್ಳಿಗಳ ರೈತರಿಗೆ ಆಗುವ ಅನಾನುಕೂಲದ ಬಗ್ಗೆ ಏನನ್ನೂ ಉಲ್ಲೇಖಿಸಿಲ್ಲ ಎಂದರು.
ಅಂತರ್ಜಲ ವೃದ್ಧಿಯಾಗಲೆಂದು ಚೆಕ್ಡ್ಯಾಂ ನಿರ್ಮಿಸಲಾಗಿದೆ. ಅದೇ ಚೆಕ್ಡ್ಯಾಂನಿಂದ ಬೇರೆಡೆಗೆ ನೀರ ಕೊಂಡೊಯ್ಯುವುದು ಅವೈಜ್ಞಾನಿಕ ಯೋಜನೆ. ಇದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು. ಕುಡಿಯುವ ನೀರಿಗಾಗಿ ನಾಗೇನಳ್ಳಿ ಕೆರೆ ಮತ್ತು ಬೆರಟಿಕೆರೆಗೆ ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ನೂರಾರು ಹಳ್ಳಿಗಳಿಗೆ ವೇದಾನದಿ ಜೀವ ನದಿಯಾಗಿದೆ. ವೇದಾನದಿಯ ನೀರನ್ನೆ ನೂರಾರು ಹಳ್ಳಿಗಳು ಕುಡಿಯಲು ಇಂದಿಗೂ ಬಳಸುತ್ತಿವೆ. ವೇದಾನದಿಯ ನೀರು ಉಳಿಸಿ ರೈತರಿಗೆ ಅನುಕೂಲ ಮಾಡಿ ಅವರ ಜೀವ ಉಳಿಸಬೇಕು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿಗಣೇಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.