ಉಳ್ಳಾಲ: ‘ಫಿಸಿಯೋಥೆರಪಿ ಭಾರತದ ಪುರಾತನ ಸಂಪ್ರದಾಯವೂ, ಆಯುರ್ವೇದದ ಭಾಗವೂ ಆಗಿದೆ. ಆಧುನಿಕ ಫಿಸಿಯೋಥೆರಪಿಸ್ಟ್ಗಳು ಸಾಂಪ್ರದಾಯಿಕ ಔಷಧ ಪದ್ಧತಿಯತ್ತ ಗಮನಹರಿಸಿದಾಗ ಗೆಲುವು ನಿಶ್ಚಿತ. ಅಂತರರಾಷ್ಟ್ರೀಯ ಸಮ್ಮೇಳನ ಇಂತಹ ಜ್ಞಾನ ಸಂಪಾದನೆಗೆ ಪೂರಕವಾಗಲಿ’ ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ಡಾ.ನಿರಂಜನ್ ವಾನಳ್ಳಿ ಅಭಿಪ್ರಾಯಪಟ್ಟರು.
ನಿಟ್ಟೆ ಫಿಸಿಯೋಥೆರಪಿ ಸಂಸ್ಥೆಯ ಬೆಳ್ಳಿಹಬ್ಬ ಪ್ರಯುಕ್ತ ಎರಡು ದಿನಗಳ ಕಾಲ ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್ ಹೆಗ್ಡೆ ಆಡಿಟೋರಿಯಂನಲ್ಲಿ ಹಮ್ಮಿಕೊಂಡ ಅಂತರರಾಷ್ಟ್ರೀಯ ಫಿಸಿಯೋಥೆರಪಿ ಸಮ್ಮೇಳನ ‘ಫಿಸಿಯೋ ಫನೇಸಿಯಾ-2022’ಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಸಾಂಪ್ರದಾಯಿಕ ತಂತ್ರಗಳನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಕಲಿಸುವ ಕೆಲಸಗಳಾಗುತ್ತಿಲ್ಲ. ಸಾಂಪ್ರದಾಯಿಕ ಔಷಧಿಯ ಪದ್ಧತಿಯನ್ನು ಮರೆಯಲು ಅಸಾಧ್ಯ. ಇಂತಹ ವಿಚಾರಗಳ ಮೇಲೆ ಕಲಿಕೆ ಇದ್ದಲ್ಲಿ ಯಶಸ್ಸಿಗೆ ದಾರಿ. ದೇಶದ ಫಿಸಿಯೋಥೆರಪಿಸ್ಟ್ಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದವರು. ಸಮ್ಮೇಳನದಿಂದ ಜ್ಞಾನವೃದ್ಧಿಯ ಜೊತೆಗೆ ಇನ್ನಷ್ಟು ನಾವೀನ್ಯತೆಗಳು ಆವಿಷ್ಕಾರವಾಗಲಿ’ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿ.ವಿಯ ಕುಲಾಧಿಪತಿ ಎನ್. ವಿನಯ ಹೆಗ್ಡೆ ಮಾತನಾಡಿ, ‘ತರಗತಿಗಳಲ್ಲಿ ಸಿಗುವ ಜ್ಞಾನ ವಿಭಿನ್ನ. ಸಹೋದ್ಯೋಗಿಗಳ ಸಹಕಾರ, ವ್ಯವಸ್ಥೆ ಜತೆಗೆ ಹೊಂದಾಣಿಕೆ ಹಾಗೂ ರೋಗಿಗಳ ಜೊತೆಗಿನ ಒಡನಾಟದ ಜ್ಞಾನ ಕ್ಷೇತ್ರದಲ್ಲಿ ಯಶಸ್ಸನ್ನು ತಂದುಕೊಡುವುದು. 1980ರಿಂದ ನಿಟ್ಟೆ ಎಂಬ ಗ್ರಾಮೀಣ ಭಾಗದಲ್ಲಿ ಹೈಸ್ಕೂಲ್ ಮೂಲಕ ಆರಂಭವಾದ ಸಂಸ್ಥೆ ಇಂದು ಉನ್ನತ ಶಿಕ್ಷಣ ಕೊಡುವಷ್ಟು ಎತ್ತರಕ್ಕೆ ತಲುಪುವಲ್ಲಿ ಆಡಳಿತ ಹಾಗೂ ಸಿಬ್ಬಂದಿ ವರ್ಗದ ಶ್ರಮ ಇದೆ’ ಎಂದರು.
ಇಂಡಿಯನ್ ಅಸೋಸಿಯೇಶನ್ ಆಫ್ ಫಿಸಿಯೋಥೆರಫಿ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಂ. ಅಣ್ಣಾಮಲೈ ಮಾತನಾಡಿದರು. ಫಿಸಿಯೋಥೆರಫಿ ತಜ್ಞರಾದ ಡಾ.ಸವಿತಾ, ಡಾ.ಎಸ್.ನಟರಾಜನ್, ಡಾ.ಪೃಥ್ವಿರಾಜ್ ಆರ್, ಡಾ.ಅಜಿತ್ ಸೋಮನ್, ಡಾ.ಪಾರ್ಥ ಪೋತಿನ್ ರೇ, ಡಾ.ರಾಸೀಝ್ ಎನ್, ಡಾ.ಸುದೀಪ್ ಕಾಲೆ, ಡಾ.ಕಾಮರಾಜ್ ಹಾಗೂ ಡಾ.ಹರೀಶ್ ಕೃಷ್ಣ, ಪಾಟಿಯಾಲದ ಡಾ.ಎ.ಜಿ.ಕೆ. ಸಿಂಗ್ ಅವರಿಗೆ ಅಕಾಡೆಮಿಕ್ ಸಾಧನೆಗಾಗಿ ಹಾಗೂ ಕ್ಲಿನಕಲ್ ಸರ್ವಿಸ್ಗಾಗಿ ಬಹರೈನ್ ಡಾ.ಶ್ರೀದೇವಿ ಶ್ರೀರಾಮರಾಜನ್ ಅವರನ್ನು ಗೌರವಿಸಲಾಯಿತು.
ನಿಟ್ಟೆ ವಿವಿ ಸಹ ಕುಲಪತಿ ಪ್ರೊ. ಡಾ.ಎಂ.ಎಸ್.ಮೂಡಿತ್ತಾಯ, ಕುಲಸಚಿವ ಡಾ.ಹರ್ಷ ಹಾಲಹಳ್ಳಿ ಉಪಸ್ಥಿತರಿದ್ದರು.
ಬಹರೈನ್, ಫಿಲಿಪೈನ್ಸ್, ಹಾಂಕಾಂಗ್ ಸೇರಿದಂತೆ ಬೇರೆ ಬೇರೆ ಭಾಗದ ಇಪ್ಪತ್ತು ಅಂತರರಾಷ್ಟ್ರೀಯ ಮಟ್ಟದ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಡಾ. ಪುರುಷೋತ್ತಮ್ ಸನ್ಮಾನಿತರನ್ನು ಪರಿಚಯಿಸಿದರು. ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಹಾಗೂ ಡೀನ್ ಪ್ರೊ.ದಾನೇಶ್ ಕುಮಾರ್ ಯು.ಕೆ. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಪ್ರೊ.ಐಶ್ವರ್ಯ ನಾಯರ್ ವಂದಿಸಿದರು. ಡಾ.ಜುಮಾನಾ ಭಗತ್ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ಹಿನ್ನೆಲೆ ಗಾಯಕರಾದ ವಿಮಲ್ ರಾಯ್, ತಾನಿಯಾ ಎಲಿಜಬೆತ್ ಮ್ಯಾಥ್ಯೂ ಮತ್ತು ಶ್ರೇಯಾ ಎಸ್. ಮೆನನ್ ಅವರಿಂದ ಸಂಗೀತ ಹಾಗೂ ಚೆಂಡೆ ಪ್ರದರ್ಶನ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.