ಮೂಡಿಗೆರೆ: ತಾಲ್ಲೂಕಿನಾದ್ಯಂತ ಸೋಮವಾರ ಇಡೀ ದಿನ ಧಾರಾಕಾರವಾಗಿ ಮಳೆ ಸುರಿಯಿತು. ಭಾನುವಾರ ತಡರಾತ್ರಿಯಿಂದ ಪ್ರಾರಂಭವಾದ ಮಳೆ, ಪಟ್ಟಣದ ಸೇರಿದಂತೆ ಹೊರಟ್ಟಿ, ಸಬ್ಬೇನಹಳ್ಳಿ, ಫಲ್ಗುಣಿ, ಬೆಟ್ಟಗೆರೆ, ಕುಂದೂರು, ಭೈರಾಪುರ, ಹೊಸ್ಕೆರೆ, ಬೆಟ್ಟದಮನೆ, ಜನ್ನಾಫುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಧಾರಾಕಾರವಾಗಿ ಸುರಿಯಿತು.
ನಿರಂತರವಾಗಿ ಮಳೆ ಸುರಿದಿದ್ದರಿಂದ ಕಳೆದ ವರ್ಷ ಭೂಕುಸಿತ ಉಂಟಾಗಿದ್ದ ಹಲವು ಕಡೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಭೂ ಕುಸಿತವಾಗಿದ್ದು, ಜನರನ್ನು ಭೀತಿಗೆ ಸಿಲುಕಿಸಿತು. ಹೆಸ್ಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತತ್ಕೊಳ ಗ್ರಾಮದ ಬಳಿ ಭೂಕುಸಿತ ಉಂಟಾಗಿದೆ. ತತ್ಕೊಳ– ಮೂಡಿಗೆರೆ ಸಂಪರ್ಕ ರಸ್ತೆಯ ಮೇಲೆ ಮಣ್ಣು ಕುಸಿದಿದ್ದು, ಸಂಜೆಯ ವೇಳೆಗೆ ಸ್ಥಳೀಯರು ಮಣ್ಣನ್ನು ತೆರವುಗೊಳಿಸಿದರು.
ಚಿಕ್ಕಳ್ಳ ರಸ್ತೆಯ ಹಳ್ಳದಗಂಡಿ ಗ್ರಾಮದ ಬಳಿ ಚಿಕ್ಕಳ ಕಿರು ಸೇತುವೆಯ ನೀರು ರಸ್ತೆ ಮೇಲೆ ಹರಿದಿದ್ದರಿಂದ ಸೇತುವೆ ಪ್ರದೇಶದ ರಸ್ತೆಯೆಲ್ಲವೂ ಜಲಾವೃತವಾಗಿತ್ತು.
ಗೋಣಿಬೀಡು ಹೋಬಳಿಯ ಕಸ್ಕೇಬೈಲ್ ಗ್ರಾಮದಲ್ಲಿ ಕಳೆದ ವರ್ಷ ಹಾನಿಯುಂಟಾಗಿದ್ದ ಕಾಫಿ ತೋಟದಲ್ಲಿ ಮತ್ತೆ ಭೂ ಕುಸಿತವಾಗಿದೆ.
ನದಿ ಪಾತ್ರದ ಪ್ರದೇಶ ಗಳಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರು ವುದರಿಂದ ಹೇಮಾವತಿ, ಜಪಾವತಿ, ಚಿಕ್ಕಳ್ಳ, ದೊಡ್ಡಳ ಸೇರಿದಂತೆ ಬಹುತೇಕ ನದಿಗಳಲ್ಲಿ ನೀರಿನ ಮಟ್ಟ ಏರಿಕೆ ಯಾಗಿದೆ. ಚುರುಕುಗೊಂಡಿರುವ ಮಳೆಯು, ಗದ್ದೆ ನಾಟಿಗೆ ನೆರವಾಗಿದ್ದು, ಮಕ್ಕಿಗದ್ದೆಗಳಲ್ಲಿ ನಾಟಿಮಾಡಲು ಅನುಕೂಲವಾಗಿದೆ.
ಉತ್ತಮ ಮಳೆ
ಕೊಪ್ಪ: ಪಟ್ಟಣ ಸೇರಿದಂತೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸೋಮವಾರ ಉತ್ತಮವಾದ ಮಳೆಯಾಗಿದೆ.
ಬೆಳಿಗ್ಗೆಯಿಂದ ಸಂಜೆಯವರೆಗೆ ಗಾಳಿಯೊಂದಿಗೆ ಬಿರುಸು ಮಳೆಯಾಗಿದೆ. ಭಾನುವಾರ ರಾತ್ರಿ ಉತ್ತಮವಾದ ಮಳೆಯಾಗಿತ್ತು.
ತಾಲ್ಲೂಕಿನ ಭುವನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡಿಬೈಲು ಗ್ರಾಮದ ನಿವಾಸಿ ಲಕ್ಷ್ಮಿ ಕೋಂ ರಂಗಯ್ಯ ಎಂಬುವರ ಮನೆಯ ಮೇಲೆ ಮರಬಿದ್ದು ಹೆಂಚುಗಳು. ಮಾಡಿನ ಶೀಟುಗಳು ಪುಡಿಯಾಗಿವೆ.
ಮುಂಗಾರು ಚುರುಕು
ನರಸಿಂಹರಾಜಪುರ: ಕಳೆದ ಹಲವು ದಿನಗಳಿಂದ ಕ್ಷೀಣಿಸಿದ್ದ ಮುಂಗಾರು ಭಾನುವಾರ ಸಂಜೆಯಿಂದ ಚುರುಕು ಗೊಂಡು ಉತ್ತಮವಾದ ಮಳೆಯಾಗಿದೆ. ಭಾನುವಾರ ಸಂಜೆ ಹಾಗೂ ರಾತ್ರಿ ಸಾಧಾರಣದಿಂದ ಮಳೆ ಸುರಿದಿತ್ತು. ಸೋಮವಾರ ಬೆಳಿಗ್ಗೆಯಿಂದ ಅಗಾಗ್ಗೆ ಬಿಡುವಿನೊಂದಿಗೆ ಗಾಳಿ ಸಹಿತ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.