ಕಡೂರು: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರು, ಆಟೋಟ ಕಲಿತವರು ದೇಶದ ಗೌರವ ಹೆಚ್ಚಿಸುವ ಸ್ಥಾನಗಳಿಗೆ ಏರಿದ ಬಹಳಷ್ಟು ಉದಾಹರಣೆಗಳಿದ್ದು, ಗ್ರಾಮೀಣ ಪ್ರತಿಭೆಗಳು ಬೆಳಗಬೇಕು ಎಂದು ಜಿಗಣೇಹಳ್ಳಿ ನೀಲಕಂಠಪ್ಪ ಆಶಿಸಿದರು.
ತಾಲ್ಲೂಕಿನ ಪಂಚೆ ಹೊಸಳ್ಳಿ ಗ್ರಾಮದಲ್ಲಿ ಗುರುವಾರ ಬೀರೂರು ಶೈಕ್ಷಣಿಕ ವಲಯದ ಎಮ್ಮೆದೊಡ್ಡಿ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳು ಮುಂದಿನ ಪ್ರಜೆಗಳು, ಗ್ರಾಮೀಣ ಪ್ರದೇಶದ ಸಾಮಾನ್ಯರ ಮಕ್ಕಳಿಗೆ ಇಂತಹ ಕ್ರೀಡಾಕೂಟಗಳು ವೇದಿಕೆಯಾಗಿವೆ. ಇಲ್ಲಿ ಸ್ಪರ್ಧಿಸಿದವರು ಜಿಲ್ಲಾ ಮಟ್ಟ, ರಾಜ್ಯಮಟ್ಟದಲ್ಲಿ ಭಾಗವಹಿಸುವಂತಾಗಲಿ. ಮಕ್ಕಳ ಪ್ರತಿಭೆ ಗುರುತಿಸುವಲ್ಲಿ ಶಿಕ್ಷಕರು ಹೆಚ್ಚು ಒತ್ತು ನೀಡಲಿ. ಕಡೂರಿನ ಸರ್ಕಾರಿ ಶಾಲೆಯಲ್ಲಿ ಓದಿದ ಎಚ್.ಎಲ್.ದತ್ತು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾದರೆ, ಕಡೂರಿನವರೇ ಆದ ವೇದಾ ಕೃಷ್ಣಮೂರ್ತಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಳುವಾಗಿ ಹೆಸರು ಮಾಡಿದರು. ಯಾರಲ್ಲಿ ಯಾವ ಪ್ರತಿಭೆ ಅಡಗಿದೆಯೋ ತಿಳಿಯದು, ಆದ್ದರಿಂದ ಮಕ್ಕಳು ಉತ್ತಮ ಫಲಿತಾಂಶ ಪಡೆದು ಯಶಸ್ವಿಯಾಗಲಿ. ಕ್ರೀಡಾಕೂಟ ಆಯೋಜನೆಗೆ ಸಹಕರಿಸಿದ ಪಂಚೆಹೊಸಳ್ಳಿ ಗ್ರಾಮಸ್ಥರನ್ನು ಅಭಿನಂದಿಸುವೆ ಎಂದು ಹೇಳಿದರು.
ಗ್ರಾಮದ ಹಿರಿಯ ಮುಖಂಡ ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರೀಡಾಕೂಟದಲ್ಲಿ ಎಮ್ಮೆದೊಡ್ಡಿ, ದೊಡ್ಡಪಟ್ಟಣಗೆರೆ ಮತ್ತು ಹೊಸಳ್ಳಿ ಕ್ಲಸ್ಟರ್ನ 15 ಶಾಲೆಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡರು.
ಈ ಸಂದರ್ಭದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ನಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಪರಮೇಶಪ್ಪ, ಶಿವರುದ್ರಪ್ಪ, ಮುಖಂಡರಾದ ಚಂದ್ರಪ್ಪ, ಮಂಜಪ್ಪ, ಹನುಮಂತಪ್ಪ, ರವಿ, ಶಿಕ್ಷಕರ ಸಂಘದ ಬಸಪ್ಪ, ಜಗದೀಶ್, ಮೈಲಾರಪ್ಪ, ವಿಜಯಲಕ್ಷ್ಮಿ, ಶಾಲೆಯ ಮುಖ್ಯ ಶಿಕ್ಷಕ ರಾಜಪ್ಪ, ಶಿಕ್ಷಕರಾದ ನವೀನ್, ಮಂಜುನಾಥ್, ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.