ADVERTISEMENT

ಶೃಂಗೇರಿ: ಶಾರದೆ ದರ್ಶನಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 16:27 IST
Last Updated 7 ಜೂನ್ 2020, 16:27 IST
ಶೃಂಗೇರಿ ಶಾರದಾ ದೇವಸ್ಥಾನ ದೇವಸ್ಥಾನದ ಪ್ರವೇಶದ್ವಾರ.
ಶೃಂಗೇರಿ ಶಾರದಾ ದೇವಸ್ಥಾನ ದೇವಸ್ಥಾನದ ಪ್ರವೇಶದ್ವಾರ.   

ಶೃಂಗೇರಿ: ಸರ್ಕಾರದ ನಿಯಮಗಳನ್ನು ಅನುಸರಿಸಿ ಶೃಂಗೇರಿ ಶಾರದಾಂಬ ದೇವಾಲಯವು ಸೋಮವಾರ ತೆರೆಯಲಿದೆ ಎಂದು ಶಾರದಾ ಮಠದ ಆಡಳಿತಾಧಿಕಾರಿ ಡಾ.ವಿ.ಆರ್.ಗೌರೀಶಂಕರ್ ತಿಳಿಸಿದ್ದಾರೆ.

‘ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆ ಮತ್ತು ಸಂಜೆ 5 ರಿಂದ ರಾತ್ರಿ 8 ಗಂಟೆಯ ತನಕ ದೇವಾಲಯದ ಬಾಗಿಲು ತೆರೆದಿರುತ್ತದೆ. ದೇವಾಲಯಕ್ಕೆ ಬರುವ ಭಕ್ತರನ್ನು ಥರ್ಮಾಲ್ ಸ್ಕ್ಯಾನಿಂಗ್‍ಗೆ ಒಳಪಡಿಸಲಾಗುತ್ತದೆ. ಸ್ಯಾನಿಟೈಸರ್ ಕಡ್ಡಾಯ ಬಳಸಬೇಕು. ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಆಧಾರ್ ಕಾರ್ಡನ್ನು ತೋರಿಸಿದರೆ ಮಾತ್ರ ಒಳಗೆ ಪ್ರವೇಶವಿದೆ. ದೇವಾಲಯದ ಒಳಗಡೆ ಆರು ಅಡಿ ಅಂತರದಲ್ಲಿ ನಿಂತು ಭಕ್ತರು ದೇವರ ದರ್ಶನ ಮಾಡಲು ಚೌಕ ರಚಿಸಲಾಗಿದೆ’ ಎಂದು ಹೇಳಿದ್ದಾರೆ.

‘ಒಂದು ಬಾರಿಗೆ 20 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಅವರು ಹೊರಗೆ ಬಂದ ಬಳಿಕ ಮತ್ತೆ 20 ಜನರು ಒಳಗೆ ಪ್ರವೇಶಿಸಬಹುದು. ಶಾರದಾ ಮಠದ ಮುಂಭಾಗದ ಗೇಟ್‍ನಲ್ಲಿ ಕಂಪ್ಯೂಟರ್ ತಂತ್ರಜ್ಞರಿಗೆ ಭಕ್ತರು ತಮ್ಮ ಮಾಹಿತಿಯನ್ನು ನೀಡಬೇಕು ಮತ್ತು ಹೊರಬರಲು ಮತ್ತೊಂದು ಗೇಟ್ ತೆರೆಯಲಾಗುತ್ತದೆ. ನರಸಿಂಹವನದ ಗುರುನಿವಾಸದಲ್ಲಿ ಉಭಯ ಗುರುಗಳ ದರ್ಶನಕ್ಕೆ ಅವಕಾಶವಿದೆ. ಬೆಳಿಗ್ಗೆ 10 ಗಂಟೆಯಿಂದ 12ರ ತನಕ ಹಾಗೂ ಸಂಜೆ 5ರಿಂದ 6 ಗಂಟೆಯ ತನಕ ಮಾತ್ರ, ಗುರುಗಳು ಭಕ್ತರಿಗೆ ದರ್ಶನ ನೀಡಲಿದ್ದಾರೆ. ಗುರುಗಳ ದರ್ಶನ ಪಡೆಯುವರು ವಿದ್ಯಾತೀರ್ಥ ಸೇತುವೆ ದಾಟಿ ಹೋಗಬೇಕು. ಆರು ಅಡಿ ಅಂತರದಲ್ಲಿ ಗುರುಗಳ ಅನುಗ್ರಹ ಪಡೆಯಬಹುದು’ ಎಂದು ಹೇಳಿದ್ದಾರೆ.

ADVERTISEMENT

‘ಭೋಜನ ಶಾಲೆಯಲ್ಲಿ ಅನ್ನಸಂತರ್ಪಣೆ ಇರುವುದಿಲ್ಲ. ಭಕ್ತರ ಅನುಕೂಲಕ್ಕಾಗಿ 250 ಕೋಣೆಗಳ ಒಂದೇ ವಸತಿಗೃಹ ತೆರೆಯಲಾಗುತ್ತದೆ. ಒಂದು ಕೋಣೆಯಲ್ಲಿ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಆದರೆ, ವಸತಿಗೃಹದಲ್ಲಿ ಭಕ್ತರಿಗೆ ಒಂದು ದಿನ ಇರಲು ಮಾತ್ರ ಅವಕಾಶ. ಎಲ್ಲಾ ಸೇವೆಗಳು ಶಾರದೆಯ ಸನ್ನಿಧಾನದಲ್ಲಿ ಸಲ್ಲಿಸಬಹುದು. ಪ್ರಸಾದ ರೂಪವಾಗಿ ಕುಂಕುಮ ಮಾತ್ರ ನೀಡಲಾಗುವುದು’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.