ADVERTISEMENT

ತೇಜೋವಧೆಯ ರಾಜಕೀಯ ಸರಿಯಲ್ಲ: ಸುಧಾಕರ ಎಸ್‌. ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 5:40 IST
Last Updated 17 ಸೆಪ್ಟೆಂಬರ್ 2022, 5:40 IST
ಸುಧಾಕರ ಎಸ್.ಶೆಟ್ಟಿ
ಸುಧಾಕರ ಎಸ್.ಶೆಟ್ಟಿ   

ಕೊಪ್ಪ: ‘ಅತಿವೃಷ್ಟಿ, ನಿರುದ್ಯೋಗ, ಅಡಿಕೆ ಹಳದಿಎಲೆ ರೋಗ, ಎಲೆಚುಕ್ಕಿ ರೋಗ ಮುಂತಾದ ಸಮಸ್ಯೆಗಳು ಕ್ಷೇತ್ರದ ಜನರನ್ನು, ರೈತಾಪಿ ವರ್ಗವನ್ನು ಹೈರಾಣಾಗಿಸಿವೆ. ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕಾದ ಸರ್ಕಾರ, ವಿರೋಧ ಪಕ್ಷಗಳನ್ನು ಟೀಕಿಸುವು ದರಲ್ಲೇ ಕಾಲ ಕಳೆಯುತ್ತಿದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಯಾವುದೋ ಸುಧಾಕರ ಶೆಟ್ಟಿ ಎಂಬ ವ್ಯಕ್ತಿ ಹೆಸರಿನ ಜತೆಗೆ ಜೆಡಿಎಸ್ ಅನ್ನು ತಳುಕುಹಾಕಿ ಬಿಜೆಪಿಯವರು ಸಾಮಾಜಿಕ ಜಾಲತಾಣ ದಲ್ಲಿ ಹರಿಬಿಟ್ಟು ನನ್ನನ್ನು ತೇಜೋವಧೆ ಮಾಡುತ್ತಿದ್ದಾರೆ. ಈ ಮೂಲಕ ರಾಜ ಕೀಯ ಲಾಭ ಗಳಿಸಬಹುದು ಎಂದು ಕೊಂಡಿದ್ದರೆ ಅದು ತಪ್ಪು’ ಎಂದರು.

‘ಅಡಿಕೆಗೆ ಹಳದಿ ಎಲೆರೋಗ, ಎಲೆಚುಕ್ಕಿ ರೋಗ ಬಾಧಿಸಿದೆ. ಸಂಶೋಧನಾ ಕೇಂದ್ರವನ್ನು ಕೊಪ್ಪದಲ್ಲಿ ತೆರೆಯಬೇಕು. ಅತಿವೃಷ್ಟಿಯಿಂದ ರಸ್ತೆ, ಮನೆಗಳಿಗೆ ಹಾನಿಯಾಗಿದೆ. ಶೇ 10ರಷ್ಟು ಮನೆಗಳಿಗೆ ಮಾತ್ರ ಪರಿಹಾರ ಸಿಕ್ಕಿದೆ, ಬಾಕಿ ಮನೆಗಳಿಗೆ ದಾಖಲೆಯಿಲ್ಲವೆಂದು ಪರಿಹಾರ ನೀಡಿಲ್ಲ, ಬಡವರಿಗೆ ಸಮಸ್ಯೆಯಾಗಿದೆ. ರಸ್ತೆಹಾನಿಯಿಂದಾಗಿ ₹ 100 ಕೋಟಿಗೂ ಅಧಿಕ ನಷ್ಟವಾಗಿದೆ. ಸರ್ಕಾರ ನೀಡಿದ ಅನುದಾನ ಸಾಕಾಗುವುದಿಲ್ಲ. ಆಡಳಿತ ನಡೆಸುವವರು ಇದರ ಬಗ್ಗೆ ಗಮನ ಹರಿಸಬೇಕು’ ಎಂದರು.

ADVERTISEMENT

‘ಶೃಂಗೇರಿ, ಬಾಳೆಹೊನ್ನೂರಿನಲ್ಲಿ ಸುಸಜ್ಜಿತ ಆಸ್ಪತ್ರೆಗೆ ಬೇಡಿಕೆ ಇಟ್ಟು ಪ್ರತಿಭಟಿಸಿದ್ದರೂ ಈವರೆಗೆ ಈಡೇರಿಲ್ಲ. ಗುಣಮಟ್ಟದ ಚಿಕಿತ್ಸೆ ಸಿಗದೇ ಬಡವರು ಪರದಾಡು ತ್ತಿದ್ದಾರೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಜೀವರಾಜ್, ಶಾಸಕ ರಾಜೇಗೌಡ ಅವರು ಅಭಿವೃದ್ಧಿಗೆ ಒತ್ತುಕೊಡಬೇಕು’ ಎಂದು ಹೇಳಿದರು.

ಕ್ಷೇತ್ರ ಜೆಡಿಎಸ್ ಘಟಕದ ಅಧ್ಯಕ್ಷ ಭಂಡಿಗಡಿ ದಿವಾಕರ ಭಟ್, ತಾಲ್ಲೂಕು ಘಟಕದ ಅಧ್ಯಕ್ಷ ಕಗ್ಗಾ ರಾಮಸ್ವಾಮಿ, ಶಿವಕರ ಶೆಟ್ಟಿ, ವಾಸಪ್ಪ ಕುಂಚೂರು, ವಾಸುದೇವ, ವಿನಯ್‌ ಕಣಿವೆ, ಎಚ್.ಆರ್.ಆನಂದ, ಫ್ರಾನ್ಸಿಸ್ ಕಾರ್ಡೋಜ, ಸುರೇಶ್ ಶೆಟ್ಟಿ, ಈ.ನಾಗೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.