ಮೂಡಿಗೆರೆ: ‘ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ನಡೆಸಿದ ಹೋರಾಟ ಶಾಸನಸಭೆಗೆ ತಲುಪಿಲ್ಲ’ ಎಂದು ಮಂಗಳೂರಿನ ಸಾಹಿತಿ, ವಾಗ್ಮಿ ಮಹಮ್ಮದ್ ರಫೀಕ್ ಮಾಸ್ಟರ್ ಹೇಳಿದರು.
ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ತುಳುಕೂಟದ ವತಿಯಿಂದ ಏರ್ಪಡಿಸಿದ್ದ ‘ತುಳು ವೈಭವ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
‘ತುಳು, ಬ್ಯಾರಿ, ಕೊಂಕಣಿ ಭಾಷೆಗಳು ಒಂದೆ ತಾಯಿಯ ಮಕ್ಕಳ ಸ್ಥಾನವನ್ನು ಪಡೆದುಕೊಂಡಿವೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಭಾಷೆಗಳು ಪ್ರತಿ ಮನೆಯ ಆಡುಭಾಷೆಗಳಾಗಿವೆ. ಈ ಭಾಷೆಯನ್ನು ರಾಜ್ಯಾಂಗದ ಭಾಷೆಯನ್ನಾಗಿ ಮಾಡಬೇಕೆಂದು ಹಾಗೂ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ತುಳುನಾಡಿನಿಂದ ಹೊರಟ ಕೂಗು ಇನ್ನೂ ಕೂಡ ಶಾಸನಸಭೆಗೆ ತಲುಪದಿರುವುದು ವಿಪರ್ಯಾಸ. ಕನ್ನಡಕ್ಕೆ ಮೊದಲನೇ ಸ್ಥಾನ ನೀಡಿ, ತುಳು ಭಾಷೆಗೆ ಎರಡನೇ ಸ್ಥಾನ ನೀಡಬೇಕಾಗಿರುವುದು ಆಡಳಿತಾರೂಢ ಸರ್ಕಾರದ ಕರ್ತವ್ಯ’ ಎಂದರು.
ಮಂಗಳೂರಿನ ವೈದ್ಯೆ ಡಾ.ಆಶಾ ಜ್ಯೋತಿ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ತುಳು ಭಾಷೆ ಮಂಗಳೂರು, ಉಡುಪಿ, ಕಾಸರಗೋಡು, ಚಿಕ್ಕಮಗಳೂರು ಸೇರಿದಂತೆ ಪ್ರಾಂತ್ಯವಾರು ವಿಭಾಗಗಳಲ್ಲಿ ಬೇರೆ ಬೇರೆ ರೀತಿಯ ಆಡುಭಾಷೆಯಾಗಿದೆ. ಆಧುನಿಕತೆಯ ಭರಾಟೆಯಿಂದ ತುಳುನಾಡಿನ ಕಲೆ ಹಾಗೂ ಸಾಹಿತ್ಯಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಅಂತರ್ಜಾತಿ ವಿವಾಹವಾದರೆ ಮೈ ಪರಚಿಕೊಳ್ಳುವವರು, ಡ್ರಗ್ಸ್ನಂತಹ ಮಾರಕ ಪದಾರ್ಥಕ್ಕೆ ಬಲಿಯಾದವರನ್ನು ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ. ಇದರಿಂದ ಸಮಾಜ ಕಲಷಿತವಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ತುಳುಕೂಟದ ಅಧ್ಯಕ್ಷ ಪಿ.ಕೆ. ಹಮೀದ್, ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ಕ್ರೈಸ್ತ ಧರ್ಮಗುರು ವಂದನೀಯ ಸ್ವಾಮಿ ಮಾರ್ಸೆಲ್ ಪಿಂಟೊ, ಡಾ. ರಾಮಚರಣ ಅಡ್ಯಂತಾಯ, ಗೋಪಾಲ ಶೆಟ್ಟಿ, ಜಾಣಪ್ಪ ಮಾಸ್ಟರ್, ಟಿ. ಹರೀಶ್, ಯೋಗೇಶ್ ಪೂಜಾರಿ, ಸುಂದರೇಶ್ ಮಾಸ್ಟರ್, ಸುರೇಶ್ ಶೆಟ್ಟಿ, ಹಸೈನಾರ್, ದೀಪಕ್ ದೊಡ್ಡಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.