ADVERTISEMENT

ಅಸಮರ್ಪಕ ವಿದ್ಯುತ್: ಜೆಡಿಎಸ್ ಧರಣಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 10:35 IST
Last Updated 24 ಅಕ್ಟೋಬರ್ 2011, 10:35 IST
ಅಸಮರ್ಪಕ ವಿದ್ಯುತ್: ಜೆಡಿಎಸ್ ಧರಣಿ
ಅಸಮರ್ಪಕ ವಿದ್ಯುತ್: ಜೆಡಿಎಸ್ ಧರಣಿ   

ಚಿತ್ರದುರ್ಗ: ಅಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿರುವ ಬಿಜೆಪಿ ಸರ್ಕಾರದ ಕ್ರಮ ಖಂಡಿಸಿ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಅಂಬೇಡ್ಕರ್ ಪ್ರತಿಮೆ ಸ್ಥಳದಲ್ಲಿ ಕೆಲಕಾಲ ಧರಣಿ ಕುಳಿತು ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. 

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಶಾಸಕ ಎಸ್.ಕೆ. ಬಸವರಾಜನ್ ಮಾತನಾಡಿ, ಬಿಜೆಪಿ ಸರ್ಕಾರ ಜಿಲ್ಲೆಯಲ್ಲಿ ಸೇರಿದಂತೆ ರಾಜ್ಯಾದ್ಯಂತ ಅಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿದೆ. ರೈತರಿಗೆ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದನ್ನು ಮರೆತಿದೆ ಎಂದು ಟೀಕಿಸಿದರು. 

ಹಣ ಕೊಟ್ಟರೂ ವಿದ್ಯುತ್ ಸಿಗದ ಸ್ಥಿತಿಯನ್ನು ರಾಜ್ಯ ಸರ್ಕಾರ ತಂದಿದೆ. ರೈತರ ಪರವಾದ ಸರ್ಕಾರ ಸಕಾಲದಲ್ಲಿ ಗೊಬ್ಬರ ವಿತರಿಸದೇ ರೈತರಿಗೆ ಶಾಪಗ್ರಸ್ತವಾಗಿದೆ. ಮಲೆನಾಡಿನಲ್ಲಿ ಸಾಕಷ್ಟು ಮಳೆಯಿಂದ ಆಣೆಕಟ್ಟುಗಳು ತುಂಬಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ವಿದ್ಯುತ್ ಸಮರ್ಪಕ ಪೂರೈಕೆ ಮಾಡದಿರುವುದು ವಿಷಾದನೀಯ ಎಂದರು.

ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಪರಿಸ್ಥಿತಿಯಲ್ಲಿ ಸರ್ಕಾರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಘೋಷಣೆ ಮಾಡಿರುವುದನ್ನು ಬಿಟ್ಟರೆ ಯಾವುದೇ ಪರಿಹಾರ ಕಾರ್ಯಗಳು ಆರಂಭವಾಗಿಲ್ಲ.

ಕೇವಲ ಹೆಸರಿಗಾಗಿ ಆರಂಭಿಸಿರುವ ಗೋಶಾಲೆಗಳಲ್ಲಿ ಪ್ರಸ್ತುತ ಜಾನುವಾರುಗಳಿಗೆ ಮೇವು ನೀರು ಇಲ್ಲದೇ ರೈತರು ಜಾನುವಾರುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಪರಿಸ್ಥಿತಿಯಿದೆ ಎಂದು ಬಸವರಾಜನ್ ದೂರಿದರು.

ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಎಂ.ಕೆ. ತಾಜ್‌ಪೀರ್, ಮಾಜಿ ಶಾಸಕ ಎ.ವಿ. ಉಮಾಪತಿ, ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಸದಸ್ಯ ಪ್ರಕಾಶ್, ಮುಖಂಡರಾದ ಅನಂದಪ್ಪ, ಆರ್. ಶೇಷಣ್ಣ ಕುಮಾರ್, ಮೀನಾಕ್ಷೀ ನಂದೀಶ್, ಎತ್ನಹಟ್ಟಿ ಗೌಡ, ವೀರಣ್ಣ, ಗೋಪಾಲ ನಾಯಕ್, ರಾಜು, ಶಂಕರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.