ADVERTISEMENT

ಆಂಜನೇಯ ರಥ: ಮುಳ್ಳು ಪಲ್ಲಕ್ಕಿ ಪವಾಡ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 5:55 IST
Last Updated 19 ಫೆಬ್ರುವರಿ 2011, 5:55 IST
ಆಂಜನೇಯ ರಥ: ಮುಳ್ಳು ಪಲ್ಲಕ್ಕಿ ಪವಾಡ
ಆಂಜನೇಯ ರಥ: ಮುಳ್ಳು ಪಲ್ಲಕ್ಕಿ ಪವಾಡ   

ನಾಯಕನಹಟ್ಟಿ: ಇಲ್ಲಿಗೆ ಸಮೀಪದ ತುರುವನೂರಿನ ಆಂಜನೇಯ ಸ್ವಾಮಿಯ ರಥೋತ್ಸವದ ಅಂಗವಾಗಿ ದೊಡ್ಡಘಟ್ಟದ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಶುಕ್ರವಾರ ದಾಸಯ್ಯನ ಮುಳ್ಳು ಪಲ್ಲಕ್ಕಿ ಪವಾಡ ಅಪಾರ ಭಕ್ತರ ನಡುವೆ ಸಂಭ್ರಮ ಸಡಗರದಿಂದ ಜರುಗಿತು.ತುರುವನೂರಿನಲ್ಲಿ ಬೆಳಿಗ್ಗೆ 11ಕ್ಕೆ ಸರಿಯಾಗಿ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿಲಾಯಿತು. ಅದಕ್ಕೂ ಮುನ್ನ ರಥದ ಚಕ್ರಕ್ಕೆ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ಆನಂತರ ಚಿಕ್ಕ ಆಂಜನೇಯ ದೇವಸ್ಥಾನದವರೆಗೆ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು.

ಮಧ್ಯಾಹ್ನ 3ಕ್ಕೆ ವ್ರತ ನಿರತ ಆಂಜನೇಯ ಸ್ವಾಮಿಯ ದಾಸಯ್ಯನವರನ್ನು ಸಕಲ ವಾದ್ಯಗಳೊಂದಿಗೆ 3 ಕಿ.ಮೀ. ದೂರದ ದೊಡ್ಡಘಟ್ಟಕ್ಕೆ ಪಾದಯಾತ್ರೆಯೊಂದಿಗೆ ಕರೆತರಲಾಯಿತು. ಮಾರ್ಗ ಮಧ್ಯೆ ಸಿಗುವಂತಹ ಭೂತಪ್ಪನ ಗುಡಿ,  ಅಡವಿ ಆಂಜನೇಯ ಸ್ವಾಮಿ ಗುಡಿಗೆ ಪೂಜೆ ಸಲ್ಲಿಸಿ, ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಬಂದು ಪೂಜೆ ಸಲ್ಲಿಸಿದರು.

ಆನಂತರ ಸಾವಿರಾರು ಜನರ ನಿರೀಕ್ಷೆಯಂತೆ ಮುಳ್ಳಿನ ಪಲ್ಲಕ್ಕಿಯಲ್ಲಿ ದಾಸಯ್ಯನನ್ನು ಮಲಗಿಸಿ ತಮಟೆ, ಢಕ್ಕೆ ವಾದ್ಯಗಳೊಂದಿಗೆ ಗ್ರಾಮದ ಓಬಳ ದೇವರ ದೇಸ್ಥಾನಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ದಾಸಯ್ಯನನ್ನು ಪಲ್ಲಕ್ಕಿಯಿಂದ ಇಳಿಸಿ ಪಾದಯಾತ್ರೆಯ ಮೂಲಕ ತುರುವರನೂರಿಗೆ ವಾದ್ಯಗಳೊಂದಿಗೆ ಕರೆತಂದರು. ಅಲ್ಲಿ ರಾತ್ರಿ ಪೂರ್ತಿ ಮುಳ್ಳಿನ ಪಲ್ಲಕ್ಕಿ ಪವಾಡ ಜರುಗಿತು. ಪವಾಡ ಕಾರ್ಯಕ್ರಮದಲ್ಲಿ ಭಕ್ತರು ಗೋವಿಂದನ ನಾಮಸ್ಮರಣೆ ಮಾಡಿ ಭಕ್ತಿ ಸಮರ್ಪಿಸಿದರು.


ನಾಳೆ ವ್ಯಾಸಂಗ ಗೋಷ್ಠಿ:
ಚಿತ್ರದುರ್ಗದ ಬ್ರಹ್ಮ ವಿದ್ಯಾ ಸಮಾಜ (ಥಿಯಾಸಾಫಿಕಲ್ ಸೊಸೈಟಿ) ಜಿಲ್ಲಾ ಘಟಕದಲ್ಲಿ ಅಡ್ಯಾರ್ ದಿನಾಚರಣೆ ಅಂಗವಾಗಿ ಫೆ.20ರಂದು ಒಂದು ದಿನದ ವ್ಯಾಸಂಗ ಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಗೋಷ್ಠಿಯಲ್ಲಿ ಮಾನವ- ಪರಬ್ರಹ್ಮನೆಡೆಗೆ, ಮನುಷ್ಯ ಮತ್ತು ಸಂಬಂಧಗಳು, ಬಾಳಿನ ಉದ್ದೇಶ, ಭಯದಾಚೆಯ ಬದುಕು, ತಾತ್ಕಾಲಿಕ ಶರೀರಗಳು ಕುರಿತು ಉಪನ್ಯಾಸ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.