ADVERTISEMENT

ಖಾಲಿ ಇರುವ ಸರ್ಕಾರಿ ಹುದ್ದೆ ಭರ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 5:30 IST
Last Updated 14 ಸೆಪ್ಟೆಂಬರ್ 2011, 5:30 IST

ಹಿರಿಯೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1.12 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ನಿರುದ್ಯೋಗಿಗಳ ಬದುಕಿಗೆ ಭದ್ರತೆ ನೀಡಬೇಕು ಎಂದು ಬಯಲುಸೀಮೆ ರೈತ ಸಂಘದ ಅಧ್ಯಕ್ಷ ಕಸವನಹಳ್ಳಿ ರಮೇಶ್, ಪ್ರಧಾನ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಒತ್ತಾಯ ಮಾಡಿದ್ದಾರೆ.

ಹಿಂದೆ ಆಡಳಿತ ನಡೆಸಿದವರು ತಮಗೆ ಬೇಕಾದವರನ್ನು ತೃಪ್ತಿಪಡಿಸಲು, ಹಿಂಬಾಲಕರಿಗೆ ಲಾಭ ಮಾಡಿಕೊಳ್ಳಲು ಬೇಕಾಬಿಟ್ಟಿಯಾಗಿ ನರ್ಸಿಂಗ್, ಐಟಿಐ, ಡಿಇಡಿ, ಬಿಇಡಿ, ಎಂಜಿನಿಯರಿಂಗ್, ಆಯುರ್ವೇದ ಮೊದಲಾದ ಕಾಲೇಜುಗಳನ್ನು ಮಂಜೂರು ಮಾಡಿದ್ದರಿಂದ ಲಕ್ಷಾಂತರ ಯುವಕರು ಪದವಿ ಪಡೆದು ಉದ್ಯೋಗಕ್ಕಾಗಿ ಪ್ರಮಾಣ ಪತ್ರಗಳನ್ನು ಕೈಯಲ್ಲಿ ಹಿಡಿದು ತಿರುಗುತ್ತಿದ್ದಾರೆ.
 
ನ್ಯಾಯಾಂಗ, ಕೃಷಿ, ಅರಣ್ಯ, ತೋಟಗಾರಿಕೆ, ಕಂದಾಯ, ನೀರಾವರಿ, ಆರೋಗ್ಯ, ಶಿಕ್ಷಣ ಮೊದಲಾದ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅವೈಜ್ಞಾನಿಕವಾಗಿ ನಿವೃತ್ತರನ್ನು ಭರ್ತಿ ಮಾಡುವ ಮೂಲಕ ಯುವಕರ ಬದುಕನ್ನು ಹಾಳುಗೆಡವಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಗೌರವಧನ, ಅರೆಕಾಲಿಕ, ಗುತ್ತಿಗೆ, ಅತಿಥಿ ನೌಕರ ಮೊದಲಾದ ಹೆಸರಿನಲ್ಲಿ ನೇಮಕಾತಿ ಮಾಡಿಕೊಳ್ಳುವುದನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು. ಅರ್ಹ ವಿದ್ಯಾವಂತ ನಿರುದ್ಯೋಗಿಗಳನ್ನು ಖಾಲಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕು ಎಂದು ರಮೇಶ್ ಹಾಗೂ ರಂಗನಾಥ್ ಒತ್ತಾಯ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.