ADVERTISEMENT

ನಿವೇಶನ ನೀಡಲು ಆಟೋ ಚಾಲಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 5:41 IST
Last Updated 25 ಡಿಸೆಂಬರ್ 2012, 5:41 IST

ಶಿವಮೊಗ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ ನೇತತ್ವದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಡಿಸಿ ಕಚೇರಿ ಮುಂಭಾಗ ಧರಣಿ ಮಾಡಿ ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರಿಗೆ ಮನವಿ ಸಲ್ಲಿಸಿದರು.

ಅಂಬೇಡ್ಕರ್ ಮತ್ತು ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಆಟೋ ಚಾಲಕರಿಗೆ ಆಶ್ರಯ ನಿವೇಶನ ಹಾಗೂ ಮನೆ ನೀಡಬೇಕೆಂದು ಬೇಡಿಕೆಗೆ ಸ್ಪಂದಿಸಿ 2007ರಂದು ಅಂದಿನ ಸರ್ಕಾರ ರಾಜೀವ್ ಗಾಂಧಿ ವಸತಿ ಯೋಜನೆಯಡಿ 250 ಚಾಲಕರಿಗೆ ನಿವೇಶನ ನೀಡಲು ಆದೇಶಿಸಿತ್ತು. ಆದರೆ ನಗರ ಆಶ್ರಯ ಸಮಿತಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಒಂದೇ ಒಂದು ನಿವೇಶನದ ಅರ್ಜಿ ನೀಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರಸ್ತುತ ಗೋವಿಂದಾಪುರ ಗ್ರಾಮದಲ್ಲಿ 1,200 ಆಶ್ರಯ ನಿವೇಶನ ನೀಡಲಾಗುತ್ತಿದ್ದು ಆಟೋ ಚಾಲಕರಿಗೆ ಶೇಕಡ 25 ಭಾಗ ಮೀಸಲಿಡುವುದಾಗಿ ಭರವಸೆ ನೀಡಿದ್ದು ಇದು ಸಂಪೂರ್ಣ ಹುಸಿಯಾಗಿದೆ ಎಂದು ದೂರಿದರು.

ಪರಿಶಿಷ್ಟ ಜಾತಿ ಪಂಗಡದ ಆಟೋ ಚಾಲಕರಿಗೆ ನಗರಸಭೆಯಿಂದ ಶೇಕಡ 22.75ರ ಯೋಜನೆಯಡಿಯಲ್ಲಿ ರೂ.6 ಲಕ್ಷ ಗಳನ್ನು ಎಲ್‌ಪಿಜಿ ಗ್ಯಾಸ್ ಟ್ಯಾಂಕ್ ಅಳವಡಿಸಲು ಬಿಡುಗಡೆ ಮಾಡಲು ಆದೇಶವಿದ್ದರೂ ಇಲ್ಲಿಯವರೆಗೂ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಆಟೋಗಳಿಗೆ ಡಿಜಿಟಲ್ ಫೇರ್ ಮೀಟರ್ ಅಳವಡಿಕೆಗೆ ರೂ. 90 ಲಕ್ಷ  ಮಂಜೂರಾಗಿದ್ದು ಈಗ ಕೇವಲ 500 ಆಟೋಗಳಿಗೆ ಮಾತ್ರ ಮೀಟರ್ ಅಳವಡಿಸಲಾಗಿದೆ. ಉಳಿದ ಆಟೋಗಳಿಗೆ ಮೀಟರ್ ಅಳವಡಿಕೆ ಪ್ರಕ್ರಿಯೆ ಆರಂಭಿಸಿಲ್ಲ ಎಂದು ದೂರಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶ್ರೀಕಾಂತ್, ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ. ಫಾಲಪ್ಪ, ಪ್ರಧಾನ ಕಾರ್ಯದರ್ಶಿ ಹೊನ್ನಶೆಟ್ಟಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.