ADVERTISEMENT

ಪುರುಷೋತ್ತಮಾನಂದಪುರಿ ಸ್ವಾಮೀಜಿ ವಿಷಾದ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 6:35 IST
Last Updated 5 ಫೆಬ್ರುವರಿ 2011, 6:35 IST


ಹಿರಿಯೂರು: ಬೆಂಗಳೂರಿನ ಓಂಕಾರಾಶ್ರಮವನ್ನು ಕಟ್ಟಿ ಬೆಳೆಸಿದ್ದು ಶಿವಪುರಿ ಸ್ವಾಮೀಜಿ. ಆದರೆ, ಅವರ ಅಕಾಲಿಕ ನಿಧನದಿಂದ ಆಶ್ರಮ ಬಲಾಢ್ಯರ ಪಾಲಾಗುವಂತೆ ಆಗಿದ್ದು, ಉಪ್ಪಾರ ಜನಾಂಗಕ್ಕೆ ತುಂಬಲಾರದ ನಷ್ಟ ಎಂದು ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.ನಗರದ ಓಂಕಾರ ಫಾರಂನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲಿಂಗೈಕ್ಯ ಶಿವಪುರಿ ಸ್ವಾಮೀಜಿ ಅವರ 63ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಆಡಳಿತದ ಸಂದರ್ಭದಲ್ಲಿ ಉಪ್ಪಾರ ಸಮಾಜದ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ ಮೇರೆಗೆ ಹಣಕಾಸು ಸಚಿವರಾಗಿದ್ದ ಯಡಿಯೂರಪ್ಪನವರು ಹತ್ತು ಕೋಟಿ ಬಿಡುಗಡೆ ಮಾಡಿದ್ದರು. ಆದರೆ, ನಂತರ ಅಧಿಕಾರಕ್ಕೆ ಬಂದ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಡಿ. ಸುಧಾಕರ್ ಅವರು ಕೇವಲ ಐದು ಕೋಟಿ ಮಾತ್ರ ಬಿಡುಗಡೆ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಅಡ್ಡಿಪಡಿಸಿದರು ಎಂದು ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಎಚ್.ಸಿ. ನೀರಾವರಿ ಆರೋಪ ಮಾಡಿದರು.

ಹಿಂದುಳಿದಿರುವ ಉಪ್ಪಾರರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕು. ಉಪ್ಪಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ದೊರಕಬೇಕು ಎಂದು ಜಿ.ಪಂ. ಅಧ್ಯಕ್ಷ ಎಂ. ಜಯಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.ಲಿಂಗೈಕ್ಯ ಶಿವಪುರಿ ಸ್ವಾಮೀಜಿ  ರಾಜೇಶ್ವರಿ ಪೀಠಕ್ಕೆ ಅಧ್ಯಕ್ಷರಾಗುವ ಅವಕಾಶವನ್ನು ಬಲಾಢ್ಯ ಸಮಾಜದವರು ತಪ್ಪಿಸಿದರು. ಸ್ವಾಮೀಜಿಯವರು ಸರ್ವಧರ್ಮ ಒಗ್ಗೂಡಿಕೆಗೆ ಪರಿಶ್ರಮಪಟ್ಟಿದ್ದರು ಎಂದು ಹಿರಿಯ ವಕೀಲ ಎಸ್.ಎಂ. ಲಾತೂರ್ ತಿಳಿಸಿದರು.

ಈ ಬಾರಿಯ ಜಿಲ್ಲಾ ಪಂಚಾಯ್ತಿಗೆ ಉಪ್ಪಾರ ಸಮಾಜದ ಒಬ್ಬರನ್ನು ಕಾಂಗ್ರೆಸ್ ಪಕ್ಷದಿಂದ ಗೆಲ್ಲಿಸಬೇಕೆಂಬ ಬಯಕೆ ಈಡೇರಲಿಲ್ಲ. ಪಕ್ಷದ ಮುಖಂಡರು ಮುಂದಿನ ದಿನಗಳಲ್ಲಾದರೂ ಉಪ್ಪಾರರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲಿ ಎಂದು ಕಾಂಗ್ರೆಸ್ ಮುಖಂಡ ಜಿ.ಎಸ್. ಮಂಜುನಾಥ್ ಒತ್ತಾಯಿಸಿದರು.ನಾಗೇಂದ್ರ, ಎಂ.ಪಿ. ಶಂಕರ್, ಎಲ್. ಮಹೇಶ್, ರಾಜಣ್ಣ, ಕೆ.ಆರ್. ತಿಪ್ಪೇಸ್ವಾಮಿ, ಜೆ. ರಾಮಚಂದ್ರಪ್ಪ, ಕರಿಯಪ್ಪ, ನೀಲಕಂಠಪ್ಪ, ಎಂ.ಪಿ. ತಿಪ್ಪೇಸ್ವಾಮಿ, ಮಲ್ಲೇಶ್, ವೈ. ಕೆಂಚಪ್ಪ, ಶರಣಪ್ಪ, ಎಂ. ಮಹಾಲಿಂಗಪ್ಪ  ಹಾಜರಿದ್ದರು.ಪ್ರೊ.ಶರಣಪ್ಪ ಸ್ವಾಗತಿಸಿದರು.  ಬಿ.ಎಂ. ಹನುಮಂತಪ್ಪ ವಂದಿಸಿದರು. ಎಚ್. ಮಹಾಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.