ADVERTISEMENT

ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 6:50 IST
Last Updated 18 ಫೆಬ್ರುವರಿ 2011, 6:50 IST

ಚಿತ್ರದುರ್ಗ: ಮಹಿಳೆಯರು ಸಹಿಸಿಕೊಳ್ಳುವ ಮನೋಭಾವ ಬಿಟ್ಟು ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಸಕ ಎಸ್.ಕೆ. ಬಸವರಾಜನ್ ಸಲಹೆ ನೀಡಿದರು.ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ 2010-11ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಚಟುವಟಿಕೆಗಳ ಸಮಾರೋಪದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉತ್ತಮ ಸಂಸ್ಕೃತಿಯುಳ್ಳ ಭಾರತ ಎಂದು ಹೇಳಿಕೊಂಡರೂ ದೇಶದಲ್ಲಿ ಮಹಿಳೆಯ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಮಹಿಳೆಯರು ಶೋಷಣೆಯನ್ನು ಧೈರ್ಯದಿಂದ ಎದುರಿಸಬೇಕು ಎಂದರು.ಈ ಹಿಂದೇ ‘ಉದ್ಯೋಗಂ ಪುರುಷ ಲಕ್ಷಣಂ’ ಎನ್ನುತ್ತಿದ್ದರು. ಪ್ರಸ್ತುತ ‘ಉದ್ಯೋಗಂ ಮನುಷ್ಯ ಲಕ್ಷಣಂ’ ಎನ್ನುವಂತಾಗಿದೆ. ಆದ್ದರಿಂದ, ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ. ಅಧ್ಯಕ್ಷ ಸಿ. ಮಹಾಲಿಂಗಪ್ಪ, ಎಲ್ಲ ನೌಕರರಿಗಿಂತ ಶಿಕ್ಷಕರಿಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕೆ.ಜಿ. ಜಗದೀಶ್, ಚಳ್ಳಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಸಿ. ಶೋಭಾ, ಉಪನ್ಯಾಸಕ ಎಂ.ವಿ. ಗುರುಸಿದ್ದಸ್ವಾಮಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ರಮಾ ನಾಗರಾಜ್, ವಿದ್ಯಾರ್ಥಿನಿ ಸಂಘದ ಕಾರ್ಯದರ್ಶಿ ಸೂಫಿಯಾ, ಜಗನ್ನಾಥ್ ಇತರರು ಹಾಜರಿದ್ದರು.
ಕಾಲೇಜಿನ ಪ್ರಾಂಶುಪಾಲ ಪಿ.ಕೆ. ಗದಗ್ ಪ್ರಾಸ್ತಾವಿಕ ಮಾತನಾಡಿದರು. ಟಿ.ಎಸ್. ಮಾನಸ ಪ್ರಾರ್ಥಿಸಿದರು. ಪದ್ಮಶ್ರೀ ವಚನ ನೃತ್ಯ ನಡೆಸಿಕೊಟ್ಟರು. ಉಪನ್ಯಾಸಕ ಬಿ. ಕೃಷ್ಣಪ್ಪ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.