ADVERTISEMENT

ರಸ್ತೆ ಒತ್ತುವರಿ ತೆರವುಗೊಳಿಸಿ, ಹೊಸ ರಸ್ತೆ ನಿರ್ಮಿಸಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 6:35 IST
Last Updated 11 ಅಕ್ಟೋಬರ್ 2017, 6:35 IST

ಚಿತ್ರದುರ್ಗ: ನಗರದ ಮುಖ್ಯರಸ್ತೆಗಳು, ಬಡಾವಣೆ ರಸ್ತೆಗಳಲ್ಲಾಗಿರುವ ಒತ್ತುವರಿಯನ್ನು ತೆರವುಗೊಳಿಸಿ ಹೊಸ ರಸ್ತೆ ನಿರ್ಮಿಸಬೇಕು ಎಂದು  ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸದಸ್ಯರು ಸಿಐಟಿಯ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘದ ಸದಸ್ಯರು, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು. ನಂತರ ಪ್ರತಿಭಟನಾ ನಿರತರ ಪರ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕೆ.ಗೌಸ್‌ಪೀರ್, ಚಿತ್ರದುರ್ಗದ ರಸ್ತೆಗಳು ಹಾಳಾಗಿವೆ.

ಮಾತ್ರವಲ್ಲ  ರಸ್ತೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಜಿಲ್ಲಾಡಳಿತ ಮೊದಲು ರಸ್ತೆ ಸಮೀಕ್ಷೆ ಮಾಡಿಸಿ  ಒತ್ತುವರಿ ತೆರವುಗೊಳಿಸಬೇಕು. ಹೊಸ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಚಳ್ಳಕೆರೆ ಟೋಲ್‌ಗೇಟ್‌ನಿಂದ ಬಿ.ಡಿ.ರಸ್ತೆ, ಪಿ.ಬಿ.ರಸ್ತೆ ಮುಖಾಂತರ ಜೆಎಂಐಟಿ ವೃತ್ತದವರೆಗೂ 16 ಮೀ ರಸ್ತೆ ವಿಸ್ತರಣೆ ಮಾಡಬೇಕು. ಹೊಳಲ್ಕೆರೆ ರಸ್ತೆಯನ್ನು ವಿಸ್ತರಿಸಬೇಕು. ಮದಕರಿನಾಯಕ ಪ್ರತಿಮಿಎಯಿಂದ ಗಾಯತ್ರಿ ಕಲ್ಯಾಣಮಂಟಪ, ಜೆಸಿಆರ್ ಬಡಾವಣೆ ಮುಖಾಂತರ ಹಾದು ಹೋಗುವ ತುರುವನೂರು ರಸ್ತೆ, ಮೆದೇಹಳ್ಳಿ ರಸ್ತೆಯನ್ನು ವಿಸ್ತರಿಸಿ, ಡಬಲ್ ರೋಡ್ ಮಾಡಬೇಕು’ ಎಂದು ಆಗ್ರಹಿಸಿದರು.

‘ನಗರದ ಒಳಗಿರುವ ಲಕ್ಷ್ಮಿಬಜಾರ್, ವಾಸವಿಮಹಲ್ ರಸ್ತೆ, ರೂಪವಾಣಿ ಟಾಕೀಸ್ ರಸ್ತೆ, ಪ್ರಸನ್ನ ಟಾಕೀಸ್, ಬಸವೇಶ್ವರ ಟಾಕೀಸ್ ರಸ್ತೆಗಳಲ್ಲೂ ಒತ್ತುವರಿಯಾಗಿದೆ. ಈ ಎಲ್ಲವುಗಳ ಸಮೀಕ್ಷೆ ಮಾಡಿಸಿ, ಒತ್ತುವರಿ ತೆರವುಗೊಳಿಸಬೇಕು’ ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಫೆಡರೇಷನ್ ಅಧ್ಯಕ್ಷ ಮಂಜುನಾಥ್ ಖಜಾಂಚಿ ಷೇಖ್ ಕಲೀಂ, ಗೌರವಾಧ್ಯಕ್ಷ ಹಜರತ್ ಅಲಿ, ಉಪಾಧ್ಯಕ್ಷ ಪಾಪಮ್ಮ, ಜಿಕ್ರಿಯಾ ಉಲ್ಲಾ ಕಾರ್ಯದರ್ಶಿ ಭಾಸ್ಕರಾ ಚಾರಿ, ರಿಯಾಜ್ ಅಹ್ಮದ್ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.