ADVERTISEMENT

ಸಂಕಷ್ಟಕ್ಕೆ ಹೆದರಿ ಪಲಾಯನ ಸಲ್ಲ

22ನೇ ವರ್ಷದ ಕೊನೆ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 5:47 IST
Last Updated 6 ಡಿಸೆಂಬರ್ 2012, 5:47 IST

ಚಿತ್ರದುರ್ಗ: ಕಷ್ಟಗಳು ಎದುರಾದಾಗ ಪಲಾಯನ ಮಾಡದೇ ಧೈರ್ಯದಿಂದ ಎದುರಿಸಬೇಕು. ಧೈರ್ಯದ ಭಾವನೆ ಇದ್ದಾಗ ಬದುಕು ಗಟ್ಟಿಗೊಳ್ಳುತ್ತದೆ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಕಿವಿಮಾತು ಹೇಳಿದರು.

ಮುರುಘಾಮಠದಲ್ಲಿ ಬುಧವಾರ ನಡೆದ 22ನೇ ವರ್ಷದ ಕೊನೆಯ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾವ ವ್ಯಕ್ತಿ ಉತ್ತಮ ಕಾರ್ಯಗಳ ಜತೆ ಸಾಗುತ್ತಾನೋ ಅವನು ದಿನದಿಂದ ದಿನಕ್ಕೆ ಬಲಿಷ್ಠ ವ್ಯಕ್ತಿಯಾಗಿ ಸಮಾಜದಲ್ಲಿ ಕಂಗೊಳಿಸುತ್ತಾನೆ. ಸಮಾಜಮುಖಿ ಕೆಲಸಗಳಿಗೆ ಯಾವುದೇ ಸಂಕುಚಿತತೆ ಇರಬಾರದು ಎಂದು ನುಡಿದರು.

ಯಾವ ಚಿತಾವಣೆ ಮಾಡದೆ, ಕೆಟ್ಟದ್ದನ್ನು ಬಯಸದೆ ಆಮಿಷಗಳಿಗೆ ಒಳಗಾಗದೆ ಕೆಲಸಗಳನ್ನು ಮಾಡಬೇಕು. ಸದಾ ಒಳಿತನ್ನು ಮಾಡುವವನು ಗಟ್ಟಿಯಾಗಿ ನಿಂತುಕೊಳ್ಳುತ್ತಾನೆ. ಅಲ್ಲಿ ಧನ್ಯತಾಭಾವ ಮೂಡುತ್ತದೆ ಎಂದರು.

ಯಾರ ಮನೆಯಲ್ಲಿ ಕೌಟುಂಬಿಕ ಚೌಕಟ್ಟಿನೊಳಗೆ ಹೆಣ್ಣು ಮಕ್ಕಳು ಅಳುತ್ತಾರೋ ಅವರ ಮನೆಗೆ ಉಜ್ವಲ ಭವಿಷ್ಯವಿರುವುದಿಲ್ಲ. ಯಾರ ಮನೆಯಲ್ಲೂ ಹೆಣ್ಣುಮಕ್ಕಳು ಕಣ್ಣೀರು ಹಾಕಬಾರದು. ಇನ್ನೊಬ್ಬರ ಕಣ್ಣೀರನ್ನು ಒರೆಸುವುದೇ ನಮಗೆ ದೊಡ್ಡಪೂಜೆ ಎಂದರು.

ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದ ಸವಣೂರಿನ ದೊಡ್ಡಹುಣಸೇಮಠದ ಚನ್ನಬಸವ ಸ್ವಾಮೀಜಿ, ಜಾತಿರಹಿತವಾಗಿ ವಿವಾಹಗಳನ್ನು ಆಯೋಜಿಸಿ ಮೂಢನಂಬಿಕೆಗಳನ್ನು ಹೊಡೆದೋಡಿಸಿ ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಶಿವಮೂರ್ತಿ ಮುರುಘಾ ಶರಣರು ಬೆಳೆಸುತ್ತಿದ್ದಾರೆ. ಈ ರೀತಿ ವೈಚಾರಿಕ ಚಿಂತನೆಯ ಕಾರ್ಯಕ್ರಮ ಗಳು ಮುರುಘಾಮಠದಲ್ಲಿ ನಡೆಯುತ್ತಿರುವುದು ಗಮನಸೆಳೆದಿದೆ ಎಂದರು.

ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ, ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ, ದಾಂಡೇಲಿಯ ಯುವ ಮುಖಂಡ ಶಂಕರ್ ಮುಂಗರವಾಡಿ, ದಾಸೋಹ ಸೇವಾರ್ಥಿಗಳಾದ ಚಳ್ಳಕೆರೆಯ ಡಾ.ಬಿ. ಚಂದ್ರನಾಯ್ಕ, ಮತ್ತು ಅಶ್ವತ್ಥಲಕ್ಷ್ಮೀ ಹಾಗೂ ಎಸ್.ಎ. ಸುಬ್ರಮಣ್ಯಂ ಶೆಟ್ಟಿ ದೊಡ್ಡಬಳ್ಳಾಪುರ, ಜಿ. ತಾರಾನಾಥ್, ಷಣ್ಮುಖಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.