ADVERTISEMENT

ಸಾಲದ ಶೂಲ: ಅಡಿಕೆ ತೋಟ ಕಡಿದ ರೈತ

ಅಂತರ್ಜಲ ಕುಸಿತ, ಗುಟ್ಕಾ ನಿಷೇಧದಿಂದ ಬೆಲೆ ಇಳಿಯುವ ಭೀತಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 11:00 IST
Last Updated 15 ಜೂನ್ 2013, 11:00 IST

ಹೊಳಲ್ಕೆರೆ: ಅಂತರ್ಜಲ ಕುಸಿತ, ಅಧಿಕ ನಿರ್ವಹಣಾ ವೆಚ್ಚದಿಂದ ಏರುತ್ತಿರುವ ಸಾಲ, ಬೋರ್‌ವೆಲ್‌ಗಳ ವೈಫಲ್ಯ, ಗುಟ್ಕಾ ನಿಷೇಧದಿಂದ ಅಡಿಕೆ ಧಾರಣೆ ಕುಸಿಯುವ ಭೀತಿ... ಈ ಎಲ್ಲಾ ಕಾರಣಗಳಿಂದ ಆತಂಕಗೊಂಡ ರೈತನೊಬ್ಬ ಮೂರು ಎಕರೆಯಲ್ಲಿ ತಾನೇ ಬೆವರು ಹರಿಸಿ ಬೆಳೆಸಿದ 12 ವರ್ಷ ಹರೆಯದ ಸುಮಾರು 1,500 ಫಲಭರಿತ ಅಡಿಕೆ ಮರಗಳನ್ನು ನೆಲಸಮಗೊಳಿಸಿದ್ದಾನೆ.

ಪಟ್ಟಣದ ರೈತ ಎಚ್.ಸಿ.ಬಸವರಾಜ ಯಾದವ್ ಎಂಬ ರೈತ ತೋಟ ಉಳಿಸಿಕೊಳ್ಳಲಾರದೇ ಕಂಗಾಲಾಗಿ ಜೆಸಿಬಿ ಯಂತ್ರ ತರಿಸಿ ಅಡಿಕೆ ತೋಟ ನಾಶಮಾಡಿದ್ದಾನೆ.  ಅಡಿಕೆ ತೋಟ ಮಾಡಲು ಲಕ್ಷಾಂತರ ರೂಪಾಯಿ ಸಾಲ ಮಾಡಿದೆ, ಸಾಲ  ತೀರಿಸಲು ಸಾಧ್ಯವಾಗತ್ತಿಲ್ಲ ಎಂದು ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನು ಕಡಿಸಿ ಹಾಕಿದ್ದಾನೆ. ಮರಗಳು ಬೇರುಸಹಿತ ಚೆಲ್ಲಾಪಿಲ್ಲಿಯಾಗಿ ಉರುಳಿ ಬಿದ್ದಿದ್ದು, ಜೋತುಬಿದ್ದಿರುವ ಅಡಿಕೆಗೊನೆಗಳ ದೃಶ್ಯ ಪರಿಸ್ಥಿತಿಯ ಭೀಕರತೆಯನ್ನು ಸಾರುತ್ತಿತ್ತು.

ತೋಟ ಮಾಡಿ ಸಾಲಗಾರನಾದೆ: `ನಾನು 5 ಎಕರೆಯಲ್ಲಿ ಅಡಿಕೆ ತೋಟ ಮಾಡಿದ್ದೇನೆ. ತೋಟದಲ್ಲಿ 9 ಬೋರ್‌ವೆಲ್‌ಗಳಿದ್ದು, ಒಂದೆರಡು ಬೋರ್‌ಗಳಲ್ಲಿ ಮಾತ್ರ ಒಂದು ಇಂಚು ನೀರು ಬರುತ್ತದೆ. ಮೊನ್ನೆ 4 ಬೋರ್ ಕೊರೆಸಿದರೂ ಒಂದು ಹನಿ ನೀರು ಬರಲಿಲ್ಲ. 950 ಅಡಿ ಆಳ ಕೊರೆದರೂ  ಪ್ರಯೋಜನವಾಗಿಲ್ಲ. ಸುಮಾರು ರೂ2.50 ಲಕ್ಷ ಮಣ್ಣುಪಾಲಾಯಿತು.

ಇದುವರೆಗೆ ತೋಟ ಮಾಡಲು ಸುಮಾರು ರೂ20 ರಿಂದ 25 ಲಕ್ಷ  ಖರ್ಚು ಮಾಡಿದ್ದೇನೆ. ಕಳೆದ ವರ್ಷ ತೋಟವನ್ನು ಕೇವಲ ರೂ1 ಲಕ್ಷಕ್ಕೆ ಗುತ್ತಿಗೆ ಕೊಟ್ಟಿದ್ದೆ. ತೋಟ ಇದ್ದರೆ ಸಾಲ ಬೆಳೆಯುತ್ತದೆಯೇ ಹೊರತು ಆದಾಯ ಬರುವುದಿಲ್ಲ ಎಂದು ಬೇಸತ್ತು ಮರಗಳನ್ನು ಉರುಳಿಸಿದ್ದೇನೆ' ಎಂದು ಭಾವುಕರಾಗಿ ನುಡಿಯುತ್ತಾರೆ ರೈತ ಬಸವರಾಜು.

ರೈತರ ನೆರವಿಗೆ ಬದ್ಧ: ಗುಟ್ಕಾ ನಿಷೇಧ ಅಡಿಕೆ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರೈತರು ದುಡುಕಿ ತೋಟವನ್ನೇ ಕಡಿಯುವ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.