ಮೊಳಕಾಲ್ಮುರು: ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ರಸ್ತೆ ದುರಸ್ತಿ ಮಾಡುವಂತೆ ಹಲವು ಬಾರಿ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗದ ಕಾರಣ ಬೇಸತ್ತ ಆಟೊ ಚಾಲಕರು ತಾವೇ ರಸ್ತೆ ದುರಸ್ತಿಗೆ ಮುಂದಾದರು.
ಕೊಂಡ್ಲಹಳ್ಳಿಯಿಂದ ಓಬಣ್ಣನಹಳ್ಳಿ ಸಂಪರ್ಕ ರಸ್ತೆ ಹದಗೆಟ್ಟಿತ್ತು. ಲೋಕೋಪಯೋಗಿ ಮತ್ತು ಬಂದರು ಅಭಿವೃದ್ಧಿ ಇಲಾಖೆಗೆ ಸೇರಿರುವ ಈ ರಸ್ತೆಯಲ್ಲಿ ವಾಹನ ಸಂಚಾರ ಸವಾಲಾಗಿತ್ತು. ಆಟೊ ಚಾಲಕರು ಬುಧವಾರ ಗುಂಡಿಗಳಿಗೆ ಮಣ್ಣು ಹಾಕಿ ದುರಸ್ತಿ ಮಾಡಿದರು.
‘ರಿಪೇರಿ ಮಾಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ರಸ್ತೆಯಲ್ಲಿ ಓಡಾಡಲು ದ್ವಿಚಕ್ರ ವಾಹನ ಮತ್ತು ಆಟೊ ಚಾಲಕರು ಪರದಾಡುವಂತಾಗಿತ್ತು. ರಸ್ತೆಗೆ ಮಣ್ಣು ಹಾಕಿ ತಾತ್ಕಾಲಿಕ ದುರಸ್ತಿ ಮಾಡಿದ್ದೇವೆ’ ಎಂದು ಚಾಲಕ ಗುರುಸ್ವಾಮಿ ಹೇಳಿದರು.
ಮುಂದಿನ ದಿನಗಳಲ್ಲಾದರೂ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಚಾಲಕರು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.