ADVERTISEMENT

ಧೈರ್ಯವೇ ಕೊರೊನಾಗೆ ಪ್ರಥಮ ಮದ್ದು...

ಕೊಂಡ್ಲಹಳ್ಳಿ ಜಯಪ್ರಕಾಶ
Published 4 ಆಗಸ್ಟ್ 2020, 5:44 IST
Last Updated 4 ಆಗಸ್ಟ್ 2020, 5:44 IST

ಮೊಳಕಾಲ್ಮುರು:ಎದೆಗುಂದದೇ ಧೈರ್ಯ ತಂದುಕೊಳ್ಳುವುದೊಂದೇ ಕೊರೊನಾಕ್ಕೆ ಬೇಕಿರುವ ಪರಿಣಾಮಕಾರಿ ಚಿಕಿತ್ಸೆ...!

ಈಚೆಗೆ ಸೋಂಕಿಗೆ ಒಳಗಾಗಿ ಗುಣಮುಖರಾಗಿ ಮನೆಗೆ ವಾಪಸಾಗಿರುವ ತಾಲ್ಲೂಕಿನ ಕೊಂಡ್ಲಹಳ್ಳಿಯ 50 ವರ್ಷದಶಿಕ್ಷಕರೊಬ್ಬರು ಹೇಳುವ ಮಾತು. ಕೋವಿಡ್‌ ಗೆದ್ದ ಬಗೆಯನ್ನು ‘ಪ್ರಜಾವಾಣಿ’ಗೆ ವಿವರಿಸಿದರು.

‘ಎಸ್ಸೆಸ್ಸೆಲ್ಸಿ ಪರೀಕ್ಷೆ ಮೌಲ್ಯಮಾಪನ ಕಾರ್ಯಕ್ಕೆ ಚಿತ್ರದುರ್ಗಕ್ಕೆ ಒಂದು ವಾರ ಕಾರಿನಲ್ಲಿ ಹೋಗಿ ಬಂದಿದ್ದೆ. ಅಲ್ಲಿ 2 ದಿನ ಆಟೊದಲ್ಲಿ ಓಡಾಡಿದ್ದೆ.ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿ ಬಳಸಿದ್ದೇನೆ. ಮೌಲ್ಯಮಾಪನ ಮುಗಿದ ಮರುದಿನ ತುಸು ಜ್ವರ ಕಾಣಿಸಿಕೊಂಡಿತು. ಒಂದು ದಿನ ಬಿಟ್ಟು ಪರೀಕ್ಷೆಮಾಡಿಸಲು ಚಳ್ಳಕೆರೆಗೆ ಹೋಗಿದ್ದಾಗ ಕೋವಿಡ್ ಸೋಂಕು ಇರುವುದು ಕಂಡುಬಂತು’ ಎಂದು ಹೇಳಿದರು.

ADVERTISEMENT

‘ಇದುವರೆಗೂ ಸೋಂಕು ಯಾವ ರೀತಿ ಬಂತು ಎಂದು ನನಗೆ ಗೊತ್ತಾಗಿಲ್ಲ. ಸೋಂಕು ಕಂಡುಬಂದಾಗ ಸ್ವಲ್ಪ ಭಯವಾಗಿತ್ತು. ಮನೆಯಲ್ಲಿಯೂ ಭಯಕ್ಕೆಒಳಗಾಗಿದ್ದರು. ಆದರೆ ನಾನು ಸೋಂಕಿಗೆ ಚಿಕಿತ್ಸೆ ಮಾತ್ರ ಇರುವ ಏಕೈಕ ಮಾತ್ರ ಎಂದು ಮನವರಿಕೆ ಮಾಡಿಕೊಂಡು ಧೈರ್ಯ ತಂದುಕೊಂಡು ಚಿಕಿತ್ಸಾ ಕೇಂದ್ರಕ್ಕೆ ಹೋಗಲು ನಿರ್ಧರಿಸಿದೆ. ವೈದ್ಯರು ಚಿತ್ರದುರ್ಗ ಅಥವಾ ರಾಂಪುರದ ಆಯ್ಕೆ ಇಟ್ಟಾಗ ಇದೇ ತಾಲ್ಲೂಕಿನ ರಾಂಪುರ ಕೋವಿಡ್ ಕೇಂದ್ರವನ್ನು ಆಯ್ಕೆ ಮಾಡಿಕೊಂಡೆ’ ಎಂದು ವಿವರಿಸಿದರು.

ರಾಂಪುರ ಕೇಂದ್ರದಲ್ಲಿ ವೈದ್ಯ ಡಾ. ರಮೇಶ್ ಹಾಗೂ ಸಿಬ್ಬಂದಿ ತುಂಬಾ ಚೆನ್ನಾಗಿ ನೋಡಿಕೊಂಡರು. ಆತ್ಮೀಯವಾಗಿ ಸ್ಪಂದಿಸಿದರು. ಉತ್ತಮ ಚಿಕಿತ್ಸೆನೀಡಿದರು. ಜತೆಗೆ ಗುಣಮಟ್ಟದ ಊಟ, ತಿಂಡಿ ನೀಡಿದರು.

‘ಗುಣಮುಖವಾಗಿ ಬಂದ ನಂತರವೂ ವೈದ್ಯ ಡಾ. ರಮೇಶ್ ಅವರಿಗೆ ಕರೆ ಮಾಡಿ ಹಲವು ಸಾರಿ ಮಾತನಾಡಿದ್ದೇನೆ. ಆತ್ಮೀಯ ನುಡಿ ಆಡುತ್ತಾರೆ. ಇದು ನನಗೆ ಹೆಚ್ಚಿನ ಧೈರ್ಯ ತುಂಬಿತು. ಕೇಂದ್ರದಲ್ಲಿ ಉತ್ತಮ ವ್ಯವಸ್ಥೆಯಿದೆ’ ಎಂದು ಮೆಚ್ಚುಗೆಯ ಮಾತನಾಡಿದರು.

‘ಕೆಲ ಮಾದ್ಯಮಗಳಲ್ಲಿ ವೈರಸ್ ಬಗ್ಗೆ ಅತಿರೇಕವಾಗಿ ತೋರಿಸುವುದು ಸರಿಯಲ್ಲ. ಇದು ಜನರನ್ನು ಭಯಕ್ಕೆ ಈಡು ಮಾಡುತ್ತಿದೆ. ಜನರು ಇಂತಹಸುದ್ದಿಗಳನ್ನು ನೋಡಿ ಭಯಪಡುವುದರಿಂದ ಹೊರಬರಬೇಕು. ಸಮುದಾಯ ಕೋವಿಡ್ ಹಿಮ್ಮೆಟ್ಟಿಸಲು ಅಗತ್ಯವಿರುವ ಏಕೈಕ ಮಾರ್ಗ ಎಂದರೆ ಸ್ವಯಂ ಧೈರ್ಯ ತಂದುಕೊಳ್ಳುವುದು’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.