ಚಿತ್ರದುರ್ಗ: ಜಿಲ್ಲೆಯ ಅಭಿವೃದ್ಧಿಗಾಗಿ ನಾಲ್ಕು ದಶಕಗಳಿಂದಲೂ ಹಲವು ಹೋರಾಟಗಳಲ್ಲಿ ಸಕ್ರಿಯರಾಗಿದ್ದ ಅಹಿಂದ ಮುಖಂಡ ಮುರುಘ
ರಾಜೇಂದ್ರ ಒಡೆಯರ್ (67) ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಸೋಮವಾರ ನಿಧನರಾದರು.
ಅವರಿಗೆ ಪತ್ನಿ, ಮೂವರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಸೆ. 22ರ ಮಧ್ಯಾಹ್ನ 12.30ಕ್ಕೆ ಹೊಳಲ್ಕೆರೆ ರಸ್ತೆಯ ಕನಕ ವೃತ್ತದ ಸಮೀಪದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಭದ್ರಾ ಮೇಲ್ದಂಡೆ, ನೇರ ರೈಲ್ವೆ ಸೇರಿ ವಿವಿಧ ಚಳವಳಿಗಳಲ್ಲಿ ಭಾಗಿಯಾಗಿದ್ದರು. ಗೋಕಾಕ್ ಚಳವಳಿ, ಕೋಟೆಯ ಸಂರಕ್ಷಣೆ, ನೆಲ, ಜಲ, ಭಾಷೆ ಸಂರಕ್ಷಣೆಗೆ ಶ್ರಮಿಸಿದವರು. ಅಮೃತ್ ಮಹಲ್ ಕಾವಲ್ ಉಳಿವಿಗಾಗಿಯೂ ಹೋರಾಟ ಮಾಡಿದ್ದರು. ಚಿತ್ರದುರ್ಗದ ಟೌನ್ ಕೋ ಆಪರೇಟಿವ್ ಸೊಸೈಟಿ ಗೌರವ ಕಾರ್ಯದರ್ಶಿ, ಜಿಲ್ಲಾ ಕಂಬಳಿ ತಯಾರಕ ಮತ್ತು ಮಾರಾಟಗಾರರ ಸಹಕಾರ ಸಂಘದ ಗೌರವ ಕಾರ್ಯದರ್ಶಿ, ಚಿತ್ರದುರ್ಗ–ದಾವಣಗೆರೆ-ತುಮಕೂರು ನೇರ ರೈಲು ಮಾರ್ಗ ಹೋರಾಟ ಸಮಿತಿ ಕಾರ್ಯಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.
ರಾಮಕೃಷ್ಣ ಹೆಗಡೆ, ಜೀವರಾಜ್ ಆಳ್ವ, ಸಿದ್ದರಾಮಯ್ಯ ಅವರ ಅನುಯಾಯಿಯಾಗಿ ಗುರುತಿಸಿಕೊಂಡಿದ್ದರು. ಯಾವುದೇ ಅಧಿಕಾರ, ಉನ್ನತ ಸ್ಥಾನಮಾನಕ್ಕೆ ಆಸೆ ಪಟ್ಟವರಲ್ಲ. ಜಿಲ್ಲೆಯ ಅಭಿವೃದ್ಧಿಗಾಗಿ ಹೋರಾಡಿದವರು ಎಂದು ಮಾಜಿ ಸಚಿವ ಎಚ್. ಆಂಜನೇಯ ಸ್ಮರಿಸಿದರು.
ರಾಜಕೀಯದಲ್ಲಿ ಗುರುತಿಸಿ ಕೊಂಡರೂ ಬಳಿಕ ಹಲವು ಹೋರಾಟದಲ್ಲಿ ತೊಡಗಿದ್ದರು ಎಂದು ನೀರಾವರಿ ಹೋರಾಟ ಸಮಿತಿಯ ಮುಖಂಡ ಜಯಣ್ಣ ನೆನಪಿಸಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.