ADVERTISEMENT

ಪಡಿತರ ಬಿಡುಗಡೆಗೆ ಆಗ್ರಹಿಸಿ ಮಸ್ಕಲ್ ಗ್ರಾಮಸ್ಥರ ಪ್ರತಿಭಟನೆ

ತಾಲ್ಲೂಕು ಕಚೇರಿ ಎದುರು

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 12:23 IST
Last Updated 23 ಜನವರಿ 2019, 12:23 IST
ಪಡಿತರ ಬಿಡುಗಡೆಗೆ ಆಗ್ರಹಿಸಿ ಹಿರಿಯೂರು ತಾಲ್ಲೂಕಿನ ಮಸ್ಕಲ್‌ ಗ್ರಾಮಸ್ಥರು ತಾಲ್ಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು
ಪಡಿತರ ಬಿಡುಗಡೆಗೆ ಆಗ್ರಹಿಸಿ ಹಿರಿಯೂರು ತಾಲ್ಲೂಕಿನ ಮಸ್ಕಲ್‌ ಗ್ರಾಮಸ್ಥರು ತಾಲ್ಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು   

ಹಿರಿಯೂರು: ಜನವರಿ ತಿಂಗಳ ಪಡಿತರ ಆಹಾರ ಧಾನ್ಯ ಬಿಡುಗಡೆ ಮಾಡುವಂತೆ ಒತ್ತಾಯಿಸಿ ತಾಲ್ಲೂಕಿನ ಮಸ್ಕಲ್ ಗ್ರಾಮದ ನೂರಾರು ಫಲಾನುಭವಿಗಳು ಬುಧವಾರ ಇಲ್ಲಿನ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜನವರಿ ತಿಂಗಳು ಮುಗಿಯುತ್ತ ಬಂದರೂ ಈ ತಿಂಗಳ ಆಹಾರವನ್ನು ಎತ್ತುವಳಿ ಮಾಡದ ಕಾರಣ ಬಡವರಿಗೆ ತೊಂದರೆ ಆಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಪ್ರತಿಭಟನಾ ನಿರತರ ಜತೆ ಮಾತನಾಡಿದ ತಹಶೀಲ್ದಾರ್ ಜೆ.ಸಿ. ವೆಂಕಟೇಶಯ್ಯ, ‘ನ್ಯಾಯ ಬೆಲೆ ಅಂಗಡಿಯಲ್ಲಿ ವಂಚನೆ ನಡೆಯುತ್ತಿದೆ. ಪಡಿತರ ವಿತರಣೆ ನ್ಯಾಯಯುತವಾಗಿ ನಡೆಯುತ್ತಿಲ್ಲ ಎಂಬ ದೂರು ಬಂದಿದ್ದರಿಂದ ತಡೆ ಹಿಡಿಯಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು’ ಎಂದರು.

ADVERTISEMENT

‘ತನಿಖೆ ನೆಪದಲ್ಲಿ ಬಡವರ ಆಹಾರ ತಡೆಹಿಡಿಯುವುದು ಯಾವ ನ್ಯಾಯ. ಕಾಲಕಾಲಕ್ಕೆ ಸರಿಯಾಗಿ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರಧಾನ್ಯ ವಿತರಿಸಲಾಗುತ್ತಿದೆ. ನಮಗೆ ಮೊದಲು ಆಹಾರಧಾನ್ಯ ಕೊಡಿ’ ಎಂದು ಪ್ರತಿಭಟನಕಾರರು ಪಟ್ಟು ಹಿಡಿದರು.

ಆಹಾರ ಇಲಾಖೆ ಉಪನಿರ್ದೇಶಕರ ಜತೆ ಮಾತನಾಡಿದ ತಹಶೀಲ್ದಾರ್‌ ತನಿಖೆಯನ್ನು ಕಾಯ್ದಿರಿಸಿ ಆಹಾರ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದರು.

ಪ್ರತಿಭಟನೆಯಲ್ಲಿ ಪರಮೇಶ್, ಬಿಂಬೋಧರ, ಶಾಂತಮೂರ್ತಿ, ಲಕ್ಷ್ಮಣ, ಸರ್ವಮ್ಮ, ಗಿರಿಜಮ್ಮ, ಭುವನೇಶ್ವರಿ, ಅಲಮೇಲು, ಸಿದ್ದಲಿಂಗಮ್ಮ, ಶಿವಲಿಂಗಮ್ಮ, ನಾಗರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.