ನಾಯಕನಹಟ್ಟಿ: ಹೋಬಳಿಯಲ್ಲಿ ಭಾನುವಾರ ಸಂಜೆ ಬೀಸಿದ ಗಾಳಿ ಮತ್ತು ಧಾರಾಕಾರಮಳೆಗೆ ವಿದ್ಯುತ್ ಪರಿವರ್ತಕಗಳು ಸೇರಿ ವಿದ್ಯುತ್ ಕಂಬಗಳು ಧರೆಗುರುಳಿವೆ.
ನೇರಲಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರಲಗುಂಟೆ, ಕಾಟವ್ವನಹಳ್ಳಿ, ಅನ್ನಪೂರ್ಣೇಶ್ವರಿ ಡಾಬಾ ಮುಂಭಾಗ ಮರ ಬಿದ್ದಿವೆ. ನಾಯಕನಹಟ್ಟಿ ಹಾಗೂ ತಳಕು ಹೋಬಳಿಯ ಹಲವೆಡೆ ನೂರಾರು ಮರಗಳು ಧರೆಗುರುಳಿವೆ.
ನೇರಲಗುಂಟೆಯಲ್ಲಿ ರಾಜ್ಯ ಹೆದ್ದಾರಿ-45ರಲ್ಲಿ ರಸ್ತೆಯಲ್ಲಿ 12ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹೋಬಳಿಯಾದ್ಯಂತ 35ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮತ್ತು 8 ರಿಂದ 12ವಿದ್ಯುತ್ ಪರಿವರ್ತಕಗಳು ಸಿಡಿಲು ಬಡಿದಯ ಸುಟ್ಟುಹೋಗಿವೆ. ಒಂದು ವಿದ್ಯುತ್ ಪರಿವರ್ತಕ ಸಿಡಿದು ಬಿದ್ದಿದೆ. ಸ್ಥಳಕ್ಕೆ ನಾಯಕನಹಟ್ಟಿ ಬೆಸ್ಕಾಂ ಶಾಖಾಧಿಕಾರಿ ಎನ್.ಬಿ. ಬೋರಯ್ಯ ಭೇಟಿ ನೀಡಿ, ವಿದ್ಯುತ್ ಕಂಬಗಳ ತೆರವು ಕಾರ್ಯಚರಣೆ ಕೈಗೊಂಡರು.
ತಳಕು ಗ್ರಾಮದ ಬಳಿ ಕೋಳಿ ಸಾಕಾಣಿಕೆಯ ಶೆಡ್ ನೆಲಕ್ಕುರುಳಿದೆ. ನೇರಲಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಮಂಚನಹಟ್ಟಿಯಲ್ಲಿ 3 ಸಿಮೆಂಟ್ ಶೀಟಿನ ಮನೆಗಳು ಮತ್ತು ಕಾಟವ್ವನಹಳ್ಳಿ ಗ್ರಾಮದಲ್ಲಿ 2 ಶೀಟಿನ ಮನೆಗಳು ಮಳೆಗಾಳಿಗೆ ಹಾನಿಗೊಳ
ಗಾಗಿವೆ ಎಂದು ನೇರಲಗುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ರಮೇಶ್ಬಾಬು ಹೇಳಿದರು.
ಸಿಡಿಲು ಬಡಿದು ಕುರಿಗಾಹಿ ಸಾವು
ತಳಕು ಹೋಬಳಿಯ ದೇವರೆಡ್ಡಿಹಳ್ಳಿ ಗ್ರಾಮದಲ್ಲಿ ಭಾನುವಾರಸಿಡಿಲು ಬಡಿದು ಕುರಿಗಾಹಿ ಯುವಕ ಮೃತಪಟ್ಟಿದ್ದಾನೆ.
ಯಶವಂತ (19) ಮೃತಪಟ್ಟ ಯುವಕ.ಭಾನುವಾರ ಸಂಜೆ ಕುರಿಗಳನ್ನು ಮೇಯಿಸಿಕೊಂಡು ಮನೆಗೆ ಬರುತ್ತಿದ್ದ ಯಶವಂತ ಜೋರು ಮಳೆ ಬರುತ್ತಿದ್ದರಿಂದ ಗ್ರಾಮದ ಹೊರವಲಯದ ಹುಣಸೆಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದಿದೆ.
ಯುವಕ ಯಶವಂತ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ಡಾ.ಬಿ.ಯೋಗೀಶ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ, ತಳಕು ಪಿಎಸ್ಐ ಮಾರುತಿ ಸ್ಥಳಕ್ಕೆ ಭೇಟಿನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.