ಮೊಳಕಾಲ್ಮುರು: ಬಗರ್ಹುಕುಂ ಫಲಾನುಭವಿಗಳ ಆಯ್ಕೆಯಲ್ಲಿ ಕಂದಾಯ ಅಧಿಕಾರಿಗಳು ಪಾರದರ್ಶಕತೆ ಹಾಗೂ ಬದ್ಧತೆ ತೋರಬೇಕು ಎಂದು ಸಚಿವ ಬಿ. ಶ್ರೀರಾಮುಲು ತಾಕೀತು ಮಾಡಿದರು.
ಶನಿವಾರ ಇಲ್ಲಿ ನಡೆದ ಬಗರ್ಹುಕುಂ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಗುವಳಿ ಪತ್ರಕ್ಕೆ ಕೋರಿ 8 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದೆ. ಅಧಿಕಾರಿಗಳು ಇದರಲ್ಲಿ ಕೇವಲ 760 ಅರ್ಜಿಗಳನ್ನುಮಾತ್ರ ವಿಲೇವಾರಿ ಮಾಡಿದ್ದಾರೆ ಎಂಬ ಉತ್ತರಕ್ಕೆ ಗರಂ ಆದ ಸಚಿವರು, ‘ಆತ್ಮಸಾಕ್ಷಿಯಿಂದಲಾದರೂ ಕೆಲಸ ಮಾಡಿ. ಇಷ್ಟು ಮಂದಿಯನ್ನು ಆಯ್ಕೆ ಮಾಡಿ ಉಳಿದ ಅರ್ಜಿಗಳನ್ನು ಹಾಗೆ ಇಟ್ಟಲ್ಲಿ ಅವರು ಎಲ್ಲಿಗೆ ಹೋಗಬೇಕು. ತಳಕು, ನಾಯಕನಹಟ್ಟಿ ಹೋಬಳಿಯಲ್ಲಿ ಹೆಚ್ಚು ವಿಳಂಬವಾಗಿದೆ’ ಎಂದು ಹಾಜರಿದ್ದ ಚಳ್ಳಕೆರೆ ತಹಶೀಲ್ದಾರ್ ಮಲ್ಲಿಕಾರ್ಜುನ್ ವಿರುದ್ಧ ಸಚಿವರು ಹರಿಹಾಯ್ದರು.
ಮಳೆ ಕೊರತೆಯಿಂದ ಕೆಲ ರೈತರು ಒಂದೆರಡು ವರ್ಷ ಬಿತ್ತನೆ ಮಾಡಿರುವುದಿಲ್ಲ. ಇವರನ್ನು ಕಡೆಗಣಿಸುವುದು ಸರಿಯಲ್ಲ. ಆದ್ದರಿಂದ ಗ್ರಾಮಲೆಕ್ಕಾಧಿಕಾರಿಗಳು ಬೇರುಮಟ್ಟದಲ್ಲಿ ಸಕ್ರಿಯವಾಗಿ ಕೆಲಸ ಮಾಡಿ ಅರ್ಹ ಉಳುಮೆದಾರರ ಪಟ್ಟಿ ಸಿದ್ಧಪಡಿಸಬೇಕು. ಕಾಲಮಿತಿಯಲ್ಲಿ ಆಯ್ಕೆ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಮಿತಿ ಸದಸ್ಯರಾದ ವಿ.ಜಿ. ಪರಮೇಶ್ವರಪ್ಪ, ಶಾರದಮ್ಮ, ಶಂಕರಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.