ಹೊಳಲ್ಕೆರೆ: ಅಳಿವಿನ ಅಂಚಿನಲ್ಲಿರುವ ಪ್ರಾಣಿ, ಪಕ್ಷಿಗಳ ಪ್ರಭೇದಗಳನ್ನು ರಕ್ಷಿಸಬೇಕು ಎಂದು ಪ್ರಾಂಶುಪಾಲರಾದ ಜೆ.ಸಿದ್ಧಲಿಂಗಮ್ಮ ಮನವಿ ಮಾಡಿದರು.
ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದಲ್ಲಿ ಶುಕ್ರವಾರ ಋಷಿ ಸಂಸ್ಕೃತಿ ಗುರುಕುಲ ಮಹಾಸಂಸ್ಥಾನ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವನ್ಯಜೀವಿ ದಿನಾಚರಣೆ ಮತ್ತು ಜಲಜಾಗೃತಿ ಅಭಿಯಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಭೂಮಿಯ ಮೇಲಿರುವ ಜೀವ ಸಂಕುಲದ ವಿಶೇಷತೆ, ಸೌಂದರ್ಯವನ್ನು ಅರ್ಥ ಮಾಡಿಸುವುದೇ ಈ ದಿನದ ಮೂಲ ಉದ್ದೇಶ. ಅಳಿವಿನಂಚಿನಲ್ಲಿರುವ ಪ್ರಾಣಿ, ಪಕ್ಷಿಗಳ ಪ್ರಭೇದಗಳನ್ನು ಸಂರಕ್ಷಿಸುವ ಉದ್ದೇಶಕ್ಕಾಗಿ ವಿಶ್ವದಾದ್ಯಂತ ವನ್ಯಜೀವಿ ಸಂರಕ್ಷಣೆ ದಿನ ಆಚರಿಸಲಾಗುತ್ತದೆ. 2012ರಲ್ಲಿ ಈ ದಿನವನ್ನು ಅಧಿಕೃತವಾಗಿ ಘೋಷಿಸಲಾಯಿತು ಎಂದು ತಿಳಿಸಿದರು.
‘ಹೆಚ್ಚುತ್ತಿರುವ ಜನಸಂಖ್ಯೆ, ಹವಾಮಾನ ವೈಪರೀತ್ಯ, ಕಾಡು ಪ್ರಾಣಿಗಳ ಬೇಟೆ ಹಾಗೂ ಕಳ್ಳ ಸಾಗಾಣಿಕೆ, ಪರಿಸರ ಮಾಲಿನ್ಯ, ಅರಣ್ಯ ನಾಶ ಮೊದಲಾದ ಕಾರಣಗಳಿಂದ ಪ್ರಪಂಚದಲ್ಲಿ ವನ್ಯಜೀವಿಗಳು ಅಳಿವಿನ ಅಂಚಿನಲ್ಲಿವೆ. ಅವುಗಳನ್ನು ಸಂರಕ್ಷಣೆ ಮಾಡದಿದ್ದರೆ ಮಾನವನಿಗೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಅರಸ್ ಕಳವಳ ವ್ಯಕ್ತಪಡಿಸಿದರು.
ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನದ ಧರ್ಮದರ್ಶಿ ಟಿ. ರುದ್ರಮುನಿಸ್ವಾಮಿ, ಯುವಜನ ಒಕ್ಕೂಟದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಎ.ಚಿತ್ತಪ್ಪ ಯಾದವ್, ಉಪನ್ಯಾಸಕರಾದ ಕೆ.ವೀರಣ್ಣ, ಎಚ್.ಟಿ. ರಮೇಶ್, ಎಚ್ ಗಿರೀಶ್, ರಾಣಿ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ನಿರ್ದೇಶಕ ಅಜಯ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.