ADVERTISEMENT

ಬೆಳಕಿಗೆ ಬಂದ ನೀಲಕಂಠೇಶ್ವರ ಸನ್ನಿಧಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 7:30 IST
Last Updated 23 ಜನವರಿ 2012, 7:30 IST

ಬಂಟ್ವಾಳ: ತಾಲ್ಲೂಕಿನ ವಾಮದಪದವು ಸಮೀಪದ ನೀಲಿ ಪ್ರದೇಶವು ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿ ಮತ್ತು ವಿಷ್ಣುಮೂರ್ತಿ ಕ್ಷೇತ್ರವಾಗಿ ಹಲವು ವರ್ಷದಿಂದ ಗುರುತಿಸಿಕೊಂಡು ವರ್ಷಂಪತ್ರಿ ನೇಮೋತ್ಸವವೂ ನಡೆಯುತ್ತಿತ್ತು.

ಕಳೆದ ವರ್ಷ ಇಲ್ಲಿನ ಭಕ್ತರು ಇರಿಸಿದ ಅಷ್ಟಮಂಗಳ ಪ್ರಶ್ನೆ ಪರಿಣಾಮ `ನೀಲಕಂಠೇಶ್ವರ~ನ ಸಾನಿಧ್ಯ ಇಲ್ಲಿರುವುದು ಗಮನಕ್ಕೆ ಬಂತು. ಸುಮಾರು 400 ವರ್ಷಗಳ ಹಿಂದೆ ಲಿಂಗಾಯಿತ ಸಮುದಾಯ ಆರಾಧಿಸಿಕೊಂಡು ಬಂದಿದ್ದ ನೀಲಕಂಠೇಶ್ವರ ದೇಗುಲವು ಕಾರಣಿಕದ ಕ್ಷೇತ್ರವಾಗಿತ್ತು. ಬಳಿಕ ಜೀರ್ಣಾವಸ್ಥೆಗೆ ತಲುಪಿದ ಕುರುಹು ಎಂಬಂತೆ ಇಲ್ಲಿ ಅಗೆಯುವಾಗ `ಷಢಾಧಾರ~ ಪ್ರತಿಷ್ಠೆ ಸಂಕೇತವಾಗಿ ಕೆಂಪುಕಲ್ಲಿನಿಂದ ತಯಾರಿಸಲಾದ ಕೂರ್ಮ, ಪದ್ಮಕಮಲ, ಕುಂಭ ಮತ್ತು ತಾಮ್ರದ ನಾಳ ದೊರೆತಿದೆ.

ಇಲ್ಲಿನ ಬಂಡೆಯೊಂದರಲ್ಲಿ `ದೋಣಿಯಾ ಕಾರ~ದ ಕೆರೆ ಕೊರೆಯಲಾಗಿದ್ದು, `ನ್ಯಾಯ ತೀರ್ಮಾನ~ವೂ ಇಲ್ಲಿ ಸಿಗುತ್ತಿತ್ತು ಎಂಬ ನಂಬಿಕೆಯಿದೆ. ಇದೇ ಕೆರೆಯ ನೀರನ್ನು ದೇವರ ಉಪಯೋಗಕ್ಕೆ ಬಳಸುವುದು ಸೇರಿದಂತೆ ಶೃದ್ದಾಭಕ್ತಿಯಿಂದ ಪ್ರೋಕ್ಷಣೆ ಮಾಡಿದಾಗ ರೋಗರುಜಿನ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇಲ್ಲಿನ ಭಕ್ತರಲ್ಲಿದೆ.

ಉದ್ಯಮಿ ವಿಜಯ ರೈ ಆಲದಪದವು ಅಧ್ಯಕ್ಷತೆಯಲ್ಲಿ ಕೆ.ತಿಮ್ಮಪ್ಪ ರೈ ಕುಂಞಂದೊಟ್ಟು, ಎಚ್.ಗೋಪಾಲಕೃಷ್ಣ ಚೌಟ, ವೆಂಕಟೇಶ ಭಟ್, ಸೀತಾರಾಮ ಪೂಜಾರಿ, ಪ್ರಕಾಶ್ಚಂದ್ರ ಆಳ್ವ ಮತ್ತಿತರರು ಸೇರಿ ರಚಿಸಿದ ಜೀರ್ಣೋದ್ಧಾರ ಸಮಿತಿಯು ಕಳೆದ 2011ನೇ ಮಾ.7ರಂದು ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.

ಇದೀಗ ಅಜ್ಜಿಬೆಟ್ಟು ಮತ್ತು ಚೆನ್ನೈತ್ತೋಡಿ ಗ್ರಾಮದ ನೂರಾರು ಭಕ್ತರು ಶ್ರಮದಾನ ನಡೆಸಿದ್ದು, ದಾನಿಗಳ ನೆರವಿನಿಂದ ರೂ.1 ಕೋಟಿ ವೆಚ್ಚದ ಸುಂದರ ದೇವಾಲಯ ನಿರ್ಮಾಣಗೊಂಡಿದೆ. ಶಿಲಾಮಯ ಗರ್ಭಗುಡಿ, ಸುತ್ತುಪೌಳಿ, ತೀರ್ಥಮಂಟಪ ನಿರ್ಮಾಣಗೊಂಡಿದ್ದು,  ನಾಗಬನ ಅಭಿವೃದ್ಧಿ ಪಡಿಸಲಾಗಿದೆ, ಸರ್ಕಾರದಿಂದ ಈಗಾಗಲೇ ರೂ.10ಲಕ್ಷ ಅನುದಾನ ದೊರೆತಿದ್ದು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲು, ತಿಮ್ಮಪ್ಪ ನಾಯ್ಕ ನಡಿಗುತ್ತು ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ರಚನೆಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.