ಹೆಬ್ರಿ: ಪ್ರತಿನಿತ್ಯ ಕೆಲಸಗಳಿಗೆ ಓಡಾಡುವವರ ಅನುಕೂಲಕ್ಕಾಗಿ ಒಂದೇ ದಿನ ಪ್ರಯಾಣ ಕೈಗೊಳ್ಳುವ ವ್ಯವಸ್ಥೆ ಕಲ್ಪಿಸಲು ಮಂಗಳೂರು ಗೋವಾ ನಡುವೆ ಇಂಟರ್ಸಿಟಿ ರೈಲು ಓಡಿಸಲು ಸಂಸದ ಆಸ್ಕರ್ ಫರ್ನಾಂಡಿಸ್ ಮತ್ತು ವೀರಪ್ಪ ಮೊಯಿಲಿ ಅವರ ಮೂಲಕ ವಿಶೇಷ ಪ್ರಯತ್ನ ನಡೆಸುತ್ತಿರುವುದಾಗಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು.
ಪೆರ್ಡೂರು ಸಮೀಪದ ಬೈರಂಪಳ್ಳಿ ಶುಕ್ರವಾರ ಮತದಾರರ ಅಹವಾಲು ಆಲಿಸಿ ಅವರು ಮಾತನಾಡಿದರು.
ಕಾರವಾರ ಬೆಂಗಳೂರು ರೈಲಿನ ಓಡಾಟದ ಸಮಯವನ್ನು ಇನ್ನೂ 3 ಗಂಟೆ ಕಡಿಮೆ ಮಾಡಲು ಕೂಡ ಪ್ರಯತ್ನ ನಡೆಸುತ್ತಿರುವುದಾಗಿ ತಿಳಿಸಿದ ಸಂಸದರು ಬಿಜೆಪಿಯವರು ನಮಗೆ ಒಂದು ಭಾರಿ ಅವಕಾಶ ಕೊಡಿ ಎಂದು ಮಾತ್ರ ಕೇಳಿದ್ದಾರೆ ಮತ್ತೊಂದು ಅವಕಾಶ ಕೇಳಿಲ್ಲ ಜನ ಕೊಡುವುದು ಇಲ್ಲ, ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಕೋಟ್ಯಂತರ ರೂಪಾಯಿ ನೀಡುತ್ತಿದ್ದರೂ ರಾಜ್ಯ ಸರ್ಕಾರ ಕೇಂದ್ರವನ್ನು ದೂರುತ್ತಲೇ ಇದೆ. ಕೇಂದ್ರ ಅನುದಾನವಿಲ್ಲದೆ ರಾಜ್ಯದಲ್ಲಿ ಏನೂ ಇಲ್ಲ, ಜನಪರ ಕೆಲಸ ಮಾಡಲು ಅವರಿಗೆ ಸಮಯವಿಲ್ಲ ಖುರ್ಚಿ ಉಳಿಸಿಕೊಳ್ಳಲು ಬಿಜೆಪಿಯವರು ಮೊದಲ ಆದ್ಯತೆ ನೀಡಿ ಜನರನ್ನು ಮರೆತಿದ್ದಾರೆ ಎಂದು ಹೆಗ್ಡೆ ಹೇಳಿದರು.
ಪಕ್ಷದ ಹಿರಿಯ ಮುಖಂಡ ಕೆ.ಶಾಂತಾರಾಮ ಸೂಡ, ಸ್ಥಳೀಯ ಮುಖಂಡರಾದ ಕುತ್ಯಾರುಬೀಡು ಶ್ರೀಧರ ಶೆಟ್ಟಿ, ಮಾಜಿ ಸಚಿವ ವಸಂತ ಸಾಲ್ಯಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಹೆಗ್ಡೆ ಮತ್ತಿತರರು ಉಪಸ್ಥಿರಿದ್ದರು.
ರಾಜಕೀಯ ಪ್ರಾಣಿಯಾಗಲು ಇಷ್ಟವಿಲ್ಲ:
ನಾನೂ ಒಬ್ಬ ಸಾಮಾನ್ಯ ಮನುಷ್ಯ, ರಾಜಕೀಯ ಪ್ರಾಣಿಯಾಗಲು ಇಷ್ಟವಿಲ್ಲ, ಕ್ರಿಕೆಟ್ ಸೇರಿ ಎಲ್ಲಾ ಕ್ರೀಡೆಯಲ್ಲೂ ವಿಶೇಷ ಆಸಕ್ತಿ ಹೊಂದಿದ್ದೇನೆ. ಬಿಡುವಿದ್ದಾಗ ಕ್ರೀಡಾ ಹವ್ಯಾಸದಲ್ಲಿ ಅಪರೂಪಕ್ಕೆ ಪಾಲ್ಗೊಳ್ಳುವೆ. ಮನುಷ್ಯನಿಗೆ ಪ್ರೀತಿ ವಿಶ್ವಾಸ, ನಂಬಿಕೆ ಮುಖ್ಯ ಜೊತೆಗೆ ಎಲ್ಲಾ ಕ್ಷೇತ್ರಗಳ ಆಸಕ್ತಿಯೂ ಮುಖ್ಯ. ನನಗೆ ಸಾಮಾನ್ಯನಂತೆ ಬದುಕಬೇಕೆನ್ನುವ ಆಸೆ ಇದೆ ಎಂದು ಸಂಸದ ಹೆಗ್ಡೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.