ADVERTISEMENT

ಸಂಚಾರಕ್ಕೆ ತೊಡಕು, ಪ್ರತಿಭಟನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2012, 7:35 IST
Last Updated 27 ಮಾರ್ಚ್ 2012, 7:35 IST

ಬಂಟ್ವಾಳ: ಬಿ.ಸಿ.ರೋಡ್ ಪೇಟೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಚತುಷ್ಪಥ ಮತ್ತು ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಂಡಿರುವುದರ ವಿರುದ್ಧ ಇಲ್ಲಿನ ವರ್ತಕರು ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ.

ಕಳೆದ ಐದು ವರ್ಷಗಳ ಹಿಂದೆ ಸ್ಥಳೀಯ ಸಾಕಷ್ಟು ಮಂದಿ ಖಾಸಗಿ ಜಮೀನುದಾರರು ಮತ್ತು ವರ್ತಕರ ವಿರೋಧದ ನಡುವೆಯೂ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಜಿಲ್ಲೆಯಲ್ಲೇ ಗರಿಷ್ಠ ಸಂಖ್ಯೆಯಲ್ಲಿ ವಾಹನ ಓಡಾಡುವ ರಸ್ತೆ ಇದು. ಈ ಬಗ್ಗೆ ಇಲ್ಲಿನ ತಾಲ್ಲೂಕು ಪಂಚಾಯಿತಿ ಮತ್ತು ಪುರಸಭೆಯಲ್ಲಿ ಸಾಕಷ್ಟು ಬಾರಿ ಗಂಭೀರ ಚರ್ಚೆ ನಡೆದಿದ್ದರೂ ಯಾವುದೇ ಪರಿಣಾಮವಾಗಿಲ್ಲ.

ಈ ನಡುವೆ ಅವೈಜ್ಞಾನಿಕ ಕ್ರಮ ಎಂಬ ಆರೋಪ ಹೊತ್ತಿರುವ `ಮೇಲ್ಸೇತುವೆ~ ಕಾಮಗಾರಿಯನ್ನು ಇರ್ಕಾನ್ ಸಂಸ್ಥೆ ಗುತ್ತಿಗೆ ವಹಿಸಿಕೊಂಡು ಆಮೆಗತಿಯಲ್ಲಿ ಕಾಮಗಾರಿ ನಡೆಸುತ್ತಿದೆ. ಆರಂಭದಲ್ಲಿ ಕಾಮಗಾರಿ ವಿಳಂಬವಾದಾಗ ಇವರು ಬಳಸುತ್ತಿದ್ದ ಕಬ್ಬಿಣದ ಪರಿಕರಗಳನ್ನು ಸ್ಥಳೀಯರು ಹರಾಜು ಮಾಡುವುದಾಗಿ ಎಚ್ಚರಿಸಿ ಬ್ಯಾನರ್ ಅಳವಡಿಸಿದ್ದರು. ಬಳಿಕ ಹಲವು ಪ್ರತಿಭಟನೆಗಳು ನಡೆದಿದ್ದವು.

ಇವರ ವಿಳಂಬ ನೀತಿಯಿಂದಾಗಿ ಮುಂಬರುವ ಮಳೆಗಾಲದಲ್ಲಿ ರಸ್ತೆ ಸಂಚಾರ ಮತ್ತಷ್ಟು ಬಿಗಡಾಯಿಸಲಿದೆ ಎಂಬ ಅಭಿಪ್ರಾಯ ಇಲ್ಲಿನ ವರ್ತಕರದ್ದು. ಈಗಾಗಲೇ ಹೊಂಡಮಯ ರಸ್ತೆಯಿಂದ ಸಾಕಷ್ಟು ದೂಳು ಹಾರಾಡುತ್ತಿದ್ದು, ಮಳೆಗಾಲದಲ್ಲಿ ಕೆಸರಿನ ಎರೆಚಾಟ ಎದುರಿಸಬೇಕಾದ ಅನಿವಾರ್ತೆ ಎದುರಾಗಿದೆ.

ಹಲವಾರು ಮಂದಿ ಜಿಲ್ಲಾಧಿಕಾರಿ ಮತ್ತು ಜನಪ್ರತಿನಿಧಿಗಳು ಭೇಟಿ ನೀಡಿ, `ಒಂದು ವಾರದಲ್ಲಿ ಪೂರ್ಣ~, ಒಂದು ತಿಂಗಳಲ್ಲಿ ಪೂರ್ಣ~ ಎಂಬ ಭರವಸೆಯನ್ನಷ್ಟೇ ನೀಡುತ್ತಾ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ನಾಗರಿಕರಿಂದ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.