ADVERTISEMENT

ಅಧಿಕಾರಿಗಳು ರಾಜಕೀಯ ಮಾಡಿದರೆ ವಜಾ: ಡಿ.ಸಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 6:32 IST
Last Updated 31 ಜನವರಿ 2018, 6:32 IST

ಪುತ್ತೂರು: ‘ಚುನಾವಣೆ ಅಧಿಸೂಚನೆ ಪ್ರಕಟಗೊಂಡ ಕ್ಷಣದಿಂದ ಚುನಾವಣೆ ಮುಗಿದು ಫಲಿತಾಂಶ ಹೊರಬರುವವರೆಗೆ ಚುನಾವಣಾ ಆಯೋಗ, ಆಯೋಗದ ಅಧಿಕಾರಿಗಳ ಮಾತನ್ನು ಮಾತ್ರ ಕೇಳಬೇಕು. ಯಾವುದೇ ರಾಜಕೀಯ ಪಕ್ಷದ ಪರ ಇಲ್ಲವೇ ವಿರೋಧವಾಗಿ ನಿಂತು ರಾಜಕೀಯ ಮಾಡಲು ಹೊರಟರೆ ತಕ್ಷಣ ಹುದ್ದೆಯಿಂದ ವಜಾಗೊಳಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಚುನಾವಣಾ ಕಾರ್ಯದ ಸಿಬ್ಬಂದಿಗೆ ಎಚ್ಚರಿಸಿದರು.

ಇಲ್ಲಿನ ಪುರಭವನದಲ್ಲಿ ಮಂಗಳವಾರ ನಡೆದ ಚುನಾವಣಾ ಸಿಬ್ಬಂದಿಯ ಪ್ರಥಮ ಹಂತದ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ಯಾವುದೇ ಪಕ್ಷ , ಸಂಬಂಧ ಮರೆತು ಚುನಾವಣಾ ಕೆಲಸವನ್ನು ಕಟ್ಟುನಿಟ್ಟಾಗಿ , ಶಿಸ್ತುಬದ್ಧವಾಗಿ ಮಾಡಬೇಕು. ಉದ್ದೇಶಪೂರ್ವಕವಾಗಿ ಚುನಾವಣಾ ಕಾರ್ಯದಲ್ಲಿ ಹೆಚ್ಚುಕಡಿಮೆ ಮಾಡಿದರೆ ಇಲ್ಲವೇ ನಿರ್ಲಕ್ಷ್ಯದ ಕೆಲಸ ಮಾಡಿದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಚುನಾವಣಾ ಅಧಿಸೂಚನೆ ಹೊರಬಿದ್ದ ಬಳಿಕ ಆಯೋಗ ಹೊರತುಪಡಿಸಿ ಸರ್ಕಾರದ ಯಾವ ಆದೇಶಕ್ಕೂ ನೀವು ಬಾಧ್ಯಸ್ಥರಲ್ಲ. ರಾಜ್ಯ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ಹೇಳುವ ಮಾತನ್ನು ಪಾಲಿಸಬೇಕಿಲ್ಲ. ಚುನಾವಣಾ ಆಯೋಗಕ್ಕೆ ಮಾತ್ರ ನೀವು ಉತ್ತರದಾಯಿಗಳಾಗಿರುತ್ತೀರಿ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.