ADVERTISEMENT

‘ರೆಡ್‌ಕ್ರಾಸ್‌ನಿಂದ ಸ್ವಯಂಸೇವೆಯ ಪಾಠ’

ರೆಡ್‌ಕ್ರಾಸ್‌ಗೆ 100 ವರ್ಷ: ಪರಿಚಯ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 4:36 IST
Last Updated 7 ಜನವರಿ 2021, 4:36 IST
ಮಂಗಳೂರು ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಗಣಪತಿ ಗೌಡ ಮಾತನಾಡಿದರು.
ಮಂಗಳೂರು ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಗಣಪತಿ ಗೌಡ ಮಾತನಾಡಿದರು.   

ಮಂಗಳೂರು: ‘ನಮ್ಮೊಳಗಿನ ಮಾನವೀಯತೆಯ ಕರೆಗೆ ಓಗೊಟ್ಟು ಪ್ರೋತ್ಸಾಹ, ಒತ್ತಡಗಳಿಲ್ಲದೇ ಸಹಾಯ ಮಾಡುವ ಅದ್ಭುತ ಪ್ರವೃತ್ತಿಯೇ ಸ್ವಯಂಸೇವೆ. ಇದರ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ’ ಎಂದು ಜಿಲ್ಲಾ ಭಾರತೀಯ ರೆಡ್‌ಕ್ರಾಸ್‌ ಸೊಸೈಟಿಯ ಯುವ ರೆಡ್‌ಕ್ರಾಸ್‌ ಸಂಯೋಜಕ ಸಚೇತ್‌ ಸುವರ್ಣ ಅಭಿಪ್ರಾಯಪಟ್ಟರು.

ಮಂಗಳೂರು ವಿಶವ್ವಿದ್ಯಾಲಯ ಮತ್ತು ವಿಶ್ವವಿದ್ಯಾಲಯ ಕಾಲೇಜಿನ ಯುವ ರೆಡ್‌ಕ್ರಾಸ್‌ ಘಟಕಗಳ ಆಶ್ರಯದಲ್ಲಿ ಬುಧವಾರ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ರೆಡ್‌ಕ್ರಾಸ್‌ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪರಿಚಯ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

‘ಹೆನ್ರಿ ಡ್ಯುನಂಟ್‌ ಸ್ಥಾಪಿಸಿದ ಅಂತರರಾಷ್ಟ್ರೀಯ ಸಂಘಟನೆ ರೆಡ್‌ಕ್ರಾಸ್‌ಗೆ 100 ವರ್ಷ ಸಂದ ಈ ಸಂದರ್ಭದಲ್ಲಿ ನಾವು ಫಲಾಪೇಕ್ಷೆಯಿಲ್ಲದೆ ಸೇವೆ ಮಾಡಿ, ಆಂತರ್ಯದ ಸಂತಸ ಕಾಣುವ ಪ್ರವೃತ್ತಿ ರೂಢಿಸಿಕೊಳ್ಳಬೇಕು. ರೆಡ್‌ಕ್ರಾಸ್‌ ಮೂಲಕ ವೈಯಕ್ತಿಕ ಕೌಶಲಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಸಮಾಜಕ್ಕೆ ಸ್ಪಂದಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಮಂಗಳೂರು ವಿಶ್ವವಿದ್ಯಾಲಯದ ರೆಡ್‌ಕ್ರಾಸ್‌ ನೋಡಲ್‌ ಅಧಿಕಾರಿ ಡಾ. ಗಣಪತಿ ಗೌಡ ಮಾತನಾಡಿ, ರೆಡ್‌ಕ್ರಾಸ್‌ ವ್ಯಕ್ತಿಯನ್ನು ಸಮಾಜಮುಖಿ ಮಾಡುತ್ತದೆ. ಜೊತೆಗೆ ತಾರತಮ್ಯರಹಿತ, ತಟಸ್ಥ, ಸ್ವತಂತ್ರ, ಸ್ವಯಂ ಸೇವೆ ಮತ್ತು ಸಾರ್ವತ್ರಿಕತೆಯ ಅಮೂಲ್ಯ ಪಾಠ ಬೋಧಿಸುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಎ. ಹರೀಶ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಯುವ ರೆಡ್‌ಕ್ರಾಸ್‌ನ ಕಾರ್ಯಕ್ರಮ ಅಧಿಕಾರಿ ಡಾ. ಕುಮಾರಸ್ವಾಮಿ ಎಂ. ಸ್ವಾಗತಿಸಿದರು. ಪ್ರಣಾಮ್‌ ಶೆಟ್ಟಿ ನಿರೂಪಿಸಿದರು. ವಿದ್ಯಾರ್ಥಿ ಕಾರ್ಯದರ್ಶಿ ನಿಶಾಂತ ಕುಮಾರ್‌, ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.