ಪುತ್ತೂರು: ಕಬಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾನುವಾರ ‘ಸ್ವಾತಂತ್ರ್ಯ ಸ್ವರಾಜ್’ ರಥಯಾತ್ರೆ ಆರಂಭಿಸುವ ವೇಳೆ ಎಸ್ಡಿಪಿಐ ಕಾರ್ಯಕರ್ತರು ತಡೆಯೊಡ್ಡಿ, ಪಂಚಾಯಿತಿ ವಿರುದ್ಧ ಧಿಕ್ಕಾರ ಕೂಗಿದರು. ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರು ಎಸ್ಡಿಪಿಐ ಕಾರ್ಯಕರ್ತರನ್ನು ಚದುರಿಸುವ ಮೂಲಕ ವಾತಾವರಣ ತಿಳಿಗೊಳಿಸಿದರು.
ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ ಸಂಚರಿಸಲು ಸಿದ್ಧಪಡಿಸಿದ್ದ ಸ್ವಾತಂತ್ರ್ಯ ರಥಕ್ಕೆ ಅಧ್ಯಕ್ಷ ವಿನಯಕುಮಾರ್ ಕಲ್ಲೇಗ ಚಾಲನೆ ನೀಡಿ, ಜೈಕಾರ ಹಾಕಿದರು. ಅಲ್ಲಿದ್ದ ಎಸ್ಡಿಪಿಐ ಕಾರ್ಯಕರ್ತರು ಸ್ವಾತಂತ್ರ್ಯ ರಥದಲ್ಲಿ ವೀರ ಸಾರ್ವಕರ್ ಭಾವಚಿತ್ರ ಇಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪಂಚಾಯಿತಿ ವಿರುದ್ಧ ಧಿಕ್ಕಾರ ಕೂಗಿದರು. ಟಿಪ್ಪು ಭಾವಚಿತ್ರ ಇಡುವಂತೆ ಒತ್ತಾಯಿಸಿದರು. ಈ ವೇಳೆ ಅಲ್ಲಿದ್ದವರ ನಡುವೆ ಪರಸ್ಪರ ವಾಗ್ವಾದ-ತಳ್ಳಾಟ ನಡೆಯಿತು. ಬಳಿಕ ಪೊಲೀಸ್ ಬಂದೋಬಸ್ತಿನಲ್ಲಿ ರಥಯಾತ್ರೆ ನಡೆಯಿತು.
ಘಟನೆಗೆ ಸಂಬಂಧಿಸಿ ಕಬಕ ಗ್ರಾಮ ಪಂಚಾಯಿತಿ ವತಿಯಿಂದ ನೀಡಿದ ದೂರನ್ನು ಆಧರಿಸಿ ಪುತ್ತೂರು ನಗರ ಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.