ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪಿವಿಎಸ್ ಕಲಾಕುಂಜದ ಶ್ರೀಕೃಷ್ಣ ಬಲರಾಮ ಮಂದಿರದ ವತಿಯಿಂದ ಆ.15 ಹಾಗೂ 16ರಂದು ವೈವಿಧ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.
ಶ್ರೀಕೃಷ್ಣ ಪ್ರಜ್ಞೆ ಪಸರಿಸುವ ಉದ್ದೇಶದಿಂದ ಧಾರ್ಮಿಕ ವಿನೋದಾವಳಿ, ಸ್ಪರ್ಧೆ, ಡಿಜಿಟಲ್ ಪ್ರಚಾರದೊಂದಿಗೆ ಭಕ್ತಿ, ಸಂಸ್ಕೃತಿ, ಸಮುದಾಯ ಸ್ಫೂರ್ತಿಯನ್ನೊಳಗೊಂಡ ಎರಡು ದಿನಗಳ ಸಂಭ್ರಮಾಚರಣೆ ನಡೆಯಲಿದೆ ಎಂದು ಇಸ್ಕಾನ್ ಅಧ್ಯಕ್ಷ ಗುಣಾಕರ ರಾಮದಾಸ, ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
15ರಂದು ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಕಲಾಕುಂಜದಲ್ಲಿ ಶ್ರೀಕೃಷ್ಣನಿಗೆ ಮಹಾಭಿಷೇಕ, ಭಜನೆ, ಆಧ್ಯಾತ್ಮಿಕ ಪ್ರವಚನ ನಡೆಯಲಿದೆ. 16ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕೊಡಿಯಾಲ್ಬೈಲ್ ಶಾರದಾ ವಿದ್ಯಾಲಯದ ಮೈದಾನದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ‘ಶ್ರೀಕೃಷ್ಣ ವೈಭವಂ’ ರೂಪಕ, ಬ್ಲಾಗರ್ಗಳು, ರೀಲ್ಸ್ ಮಾಡುವವರಿಗಾಗಿ ‘ವ್ಲಾಗ್ ಫಾರ್ ಕೃಷ್ಣ’ ಕಾರ್ಯಕ್ರಮ, ಛದ್ಮವೇಷ ಸ್ಪರ್ಧೆ, ಕೃಷ್ಣನ ಕುರಿತ ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ. ಫುಡ್ ಸ್ಟಾಲ್ಗಳು ಇರಲಿವೆ. ಮಧ್ಯರಾತ್ರಿ ಕೃಷ್ಣನಿಗೆ ಜನ್ಮ ಆರತಿ, ಮಹಾಭಿಷೇಕದೊಂದಿಗೆ ಆಚರಣೆ ಸಂಪನ್ನಗೊಳ್ಳಲಿದೆ ಎಂದು ವಿವರಿಸಿದರು.
ಸನಂದನ ದಾಸ, ಸುಂದರ ಗೌರ ದಾಸ, ಬಿ.ಜೆ. ಮನು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.