ಕಾಸರಗೋಡು: ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಪ್ರಚಾರ ಪಡಿಸುವ ನಿಟ್ಟಿನಲ್ಲಿ ಕೇರಳ ತುಳು ಅಕಾಡೆಮಿಯು ಭಾಷಾ ಅಲ್ಪಸಂಖ್ಯಾತ ತುಳು ಜನರ ಕಲಾ, ಸಾಂಸ್ಕೃತಿಕ ಚಟುವಟಿಕೆಗಳನ್ನು ಸಮಾಜಕ್ಕೆ ತಲುಪಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತುಳು ಅಕಾಡೆಮಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆ.ಆರ್.ಜಯಾನಂದ ಹೇಳಿದರು.
ಕೋವಿಡ್ನಿಂದಾಗಿ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಅಕಾಡೆಮಿಯ ಚಟುವಟಿಕೆಗಳು ಈಗ ಸಕ್ರಿಯಗೊಳ್ಳಲಿವೆ. ತುಳುನಾಡಿನ ಇತಿಹಾಸ ಇದುವರೆಗೂ ಅಧಿಕೃತವಾಗಿ ದಾಖಲಾಗಿಲ್ಲ. ಕನ್ನಡ ಪ್ರದೇಶಕ್ಕೆ ಸಂಬಂಧಿಸಿದ ಇತಿಹಾಸವಿದ್ದರೂ ಬೇಕಲದವರೆಗೆ ಇರುವ ಹಳೆ ತುಳುನಾಡಿನ ಕುರಿತಾದ ದಾಖಲೆಗಳು ಇಲ್ಲ. ಈ ಎಲ್ಲಾ ಚರಿತ್ರೆಗಳನ್ನು ಒಳಗೊಂಡಿರುವ ಪ್ರತ್ಯೇಕ ವಿಶೇಷಾಂಕವನ್ನು ತುಳು ಅಕಾಡೆಮಿ ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.
ಅಕಾಡೆಮಿಯ ಆರಂಭದ ದಿನಗಳಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳನ್ನು ಇನ್ನಷ್ಟು ಶ್ರೇಷ್ಠತೆಯೊಂದಿಗೆ ಮತ್ತೊಮ್ಮೆ ನಡೆಸಲಾಗುವುದು. ತುಳುವಿನ ‘ರಾಷ್ಟ್ರೀಯ ಹಬ್ಬ’ ಇದರಲ್ಲಿ ಪ್ರಮುಖವಾದುದು. ರಾಷ್ಟ್ರಮಟ್ಟದಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಗಾಗಿ ದುಡಿಯುವವರನ್ನು ಇದರ ಭಾಗವಾಗಿ ಪರಿಗಣಿಸಲಾಗುವುದು. ತುಳು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರಾಮಾಣಿಕವಾಗಿ ತಿಳಿದಿರುವ ತಜ್ಞರನ್ನು ಜೊತೆಗೂಡಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮತ್ತು ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗುವುದು. ಈ ತಿಂಗಳಿನಲ್ಲಿ ಗ್ರಾಮೋತ್ಸವಗಳನ್ನು ಏರ್ಪಡಿಸಲಾಗುತ್ತದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.