ADVERTISEMENT

ಉಚಿತ ಲಸಿಕೆ ಜಾಹೀರಾತು ಹಿಂಪಡೆಯಿರಿ

ಕಾಂಗ್ರೆಸ್‌ ಜನಾಂದೋಲನದಲ್ಲಿ ಶಾಸಕ ಯು.ಟಿ. ಖಾದರ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 3:45 IST
Last Updated 25 ಜೂನ್ 2021, 3:45 IST
ಮಂಗಳೂರಿನಲ್ಲಿ ಗುರುವಾರ ನಡೆದ ಕಾಂಗ್ರೆಸ್ ಜನಾಂದೋಲನದಲ್ಲಿ ಶಾಸಕ ಯು.ಟಿ.ಖಾದರ್ ಮಾತನಾಡಿದರು.
ಮಂಗಳೂರಿನಲ್ಲಿ ಗುರುವಾರ ನಡೆದ ಕಾಂಗ್ರೆಸ್ ಜನಾಂದೋಲನದಲ್ಲಿ ಶಾಸಕ ಯು.ಟಿ.ಖಾದರ್ ಮಾತನಾಡಿದರು.   

ಮಂಗಳೂರು: ಕಾಂಗ್ರೆಸ್‌ ಜಿಲ್ಲಾ ಘಟಕದ ಸಹಾಯವಾಣಿ ವತಿಯಿಂದ ಎಲ್ಲರಿಗೂ ಉಚಿತ ಲಸಿಕೆಯ ಬೇಡಿಕೆ ಮುಂದಿಟ್ಟು ಹಮ್ಮಿಕೊಂಡಿರುವ ಜನಾಂದೋಲನಕ್ಕೆ ಶಾಸಕ ಯು.ಟಿ. ಖಾದರ್ ಗುರುವಾರ ಇಲ್ಲಿ ಚಾಲನೆ ನೀಡಿದರು.

‘ಸರ್ವರಿಗೂ ಉಚಿತ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಜನರಿಗೆ ಲಸಿಕೆ ಸಿಗುತ್ತಿಲ್ಲ. ನಾಮಫಲಕದಲ್ಲಿ ಮಾತ್ರ ಇದು ಉಚಿತವಾಗಿದೆ. ಏಳು ವರ್ಷಗಳಿಂದ ನೀಡಿರುವ ಎಲ್ಲ ಆಶ್ವಾಸನೆಗಳನ್ನು ಈಡೇರಿಸದೆ, ವಂಚಿಸಿರುವ ಬಿಜೆಪಿ ಸರ್ಕಾರ, ಈಗ ಲಸಿಕೆ ನೀಡುವುದರಲ್ಲಿಯೂ ವಂಚನೆ ಮಾಡುತ್ತಿದೆ. ಉಚಿತ ಲಸಿಕೆ ಜಾಹೀರಾತನ್ನು ಹಿಂದಕ್ಕೆ ಪಡೆಯಬೇಕು’ ಎಂದು ಖಾದರ್ ಒತ್ತಾಯಿಸಿದರು.

ಕೋವಿಡ್ ಸಹಾಯವಾಣಿಯ ಸಂಚಾಲಕ ಐವನ್ ಡಿಸೋಜ ಮಾತನಾಡಿ, ‘ಮಂಗಳೂರು ನಗರದಲ್ಲಿ ದಿನವೊಂದಕ್ಕೆ 10ಸಾವಿರ ಮಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತದೆ. ಪ್ರತಿ ಡೋಸ್ ಲಸಿಕೆಗೆ ₹ 850 ವಸೂಲು ಮಾಡಲಾಗುತ್ತಿದೆ. ಸರ್ಕಾರದಿಂದ ದಿನಕ್ಕೆ ಕೇವಲ 800 ಮಂದಿಗೆ ಲಸಿಕೆ ನೀಡಲಾಗುತ್ತಿದೆ. 10ಸಾವಿರ ಲಸಿಕೆಗಳಿಗೆ ಹಣ ಪಡೆದ ಮೇಲೆ ಲಸಿಕೆ ಉಚಿತ ಆಗುವುದು ಹೇಗೆ? ಜನರನ್ನು ವಂಚಿಸಲೂ ಮಿತಿ ಇರಬೇಕು’ ಎಂದು ಅವರು, ‘ಜಾಹೀರಾತು ಹಿಂದಕ್ಕೆ ಪಡೆಯಿರಿ’ ಎನ್ನುತ್ತ ಫಲಕದ ಎದುರು ನಿಂತು ಪ್ರತಿಭಟಿಸಿದರು.

ADVERTISEMENT

ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಉಪಮೇಯರ್ ಮೊಹಮ್ಮದ್ ಕುಂಜತ್ತಬೈಲ್, ಮಹಾನಗರ ಪಾಲಿಕೆ ಸದಸ್ಯ ನವೀನ್ ಡಿಸೋಜ ಮಾತನಾಡಿದರು. ಪ್ರಮುಖರಾದ ಭಾಸ್ಕರ್ ರಾವ್, ಅಪ್ಪಿಲತಾ, ಗೀತಾ ಪಾಂಡೇಶ್ವರ, ಸಂತೋಷ್ ಶೆಟ್ಟಿ, ಸದಾಶಿವ ಶೆಟ್ಟಿ, ಎನ್.ಎಸ್. ಕರೀಂ, ಅಶಿತ್ ಪಿರೇರಾ, ಶೋಭಾ ಕೇಶವ, ತೆರೆಜಾ ಪಿಂಟೊ, ಮೀನಾ ಟೆಲ್ಲಿಸ್, ಸತೀಶ್ ಪೆಂಗಲ್, ಇಮ್ರಾನ್, ಯೂಸೂಫ್ ಉಚ್ಚಿಲ್, ಆರೀಫ್ ಬಾವ, ಮಹೇಶ್ ಕೋಡಿಕಲ್, ಜೇಮ್ಸ್ ಪ್ರವೀಣ್, ಹಸನ್ ಪಳ್ನೀರ್, ದೀಕ್ಷಿತ್ ಅತ್ತಾವರ ಇದ್ದರು. ಸಾಹುಲ್ ಹಮೀದ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.