ಮಂಗಳೂರು: ಅಂತರರಾಷ್ಟ್ರೀಯ ರೋಟರಿ ಸಂಸ್ಥೆ ಪ್ರಾಯೋಜಿಸಿದ ‘ರಾಷ್ಟ್ರ ನಿರ್ಮಾತೃ‘ ಪ್ರಶಸ್ತಿಯನ್ನು ಸರ್ಕಾರಿ ಶಾಲೆಗಳ ಮೂವರು ಶಿಕ್ಷಕಿಯರಾದ ಪೆರ್ಮನ್ನೂರು ಶಾಲೆಯ ಕನ್ನಡ ಶಿಕ್ಷಕಿ ಜ್ಯೋತಿ, ಮುಲ್ಲಕಾಡಿನ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಹರಿಣಾಕ್ಷಿ ಮತ್ತು ತರಿಕರಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ರಮಾದೇವಿ ಅವರಿಗೆ ಪ್ರದಾನ ಮಾಡಲಾಯಿತು.
ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಆಶ್ರಯದಲ್ಲಿ ಶುಕ್ರವಾರ ನಗರದಲ್ಲಿ ಜರಗಿದ ಸಂಸ್ಥೆಯ ಮೂಲಭೂತ ಸಾಕ್ಷರತೆ ಮತ್ತು ಶಿಕ್ಷಣ ಯೋಜನೆಯ ಅಭಿಯಾನದ ಅಂಗವಾಗಿ ಆಚರಿಸಿದ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಶೈಕ್ಷಣಿಕ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವ ರೋಟರಿ ಸಂಸ್ಥೆಯ ಆದರ್ಶ ನಿಸ್ವಾರ್ಥ, ಪ್ರಾಮಾಣಿಕ ಸೇವೆ ಅಭಿನಂದನೀಯ ಎಂದು ಈ ಶಿಕ್ಷಕಿಯರು ಹೇಳಿದರು.
ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಈಶ್ವರ ಮುಖ್ಯ ಅತಿಥಿಯಾಗಿದ್ದರು. ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯ, ರೋಟರಿ ಸಹಾಯಕ ಗರ್ವನರ್ ರಾಜ್ಗೋಪಾಲ್ ರೈ, ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಪ್ರೇಮನಾಥ್ ಕುಡ್ವ, ಮಾಜಿ ಅಧ್ಯಕ್ಷ ರಾಮಶೇಷ ಶೆಟ್ಟಿ ವೇದಿಕೆಯಲ್ಲಿದ್ದರು. ಸಂಸ್ಥೆಯ ಅಧ್ಯಕ್ಷ ಸಾಯಿಬಾಬಾ ರಾವ್ ಸ್ವಾಗತಿಸಿದರು. ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ದೇವದಾಸ್ ರೈ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಕಾರ್ಯದರ್ಶಿ ಪ್ರದೀಪ್ ಕುಲಾಲ್ ವರದಿ ಮಂಡಿಸಿದರು. ಎಸ್.ಎಸ್. ನ್ಯಾಕ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.