ಮಂಗಳೂರು: ಸಹಪಾಠಿಗಳಿಗೆ ₹ 27.96 ಲಕ್ಷ ವಂಚನೆ ನಡೆಸಿದ ಬಗ್ಗೆ ಸುರತ್ಕಲ್ ಎನ್ಐಟಿಕೆಯ 4ನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ವಿರುದ್ಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ ಯಶವರ್ಧನ್ ಜೈನ್ ಅಲಿಯಾಸ್ ವೈವಿಜೆ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಆರೋಪಿ ವಿದ್ಯಾರ್ಥಿಯು 2022ರ ಮಾರ್ಚ್ನಲ್ಲಿ ವಾಟ್ಸಾಪ್ ಗ್ರೂಪಿನ ಮೂಲಕ ಸಹಪಾಠಿಗಳಿಗೆ ಸಂದೇಶ ಕಳುಹಿಸಿ, ಹಣ ಹೂಡಿಕೆ ಮಾಡಿದರೆ ವಾರದಲ್ಲಿ ಶೇ 10ರಷ್ಟು ಲಾಭಾಂಶ ನೀಡುವುದಾಗಿ ಭರವಸೆ ನೀಡಿದರು. ಜನರನ್ನು ವಂಚಿಸುವ ಸಲುವಾಗಿ ‘ವೈವಿಜೆ ಇನ್ವೆಸ್ಟ್ಮೆಂಟ್ ಎಂಟರ್ಪ್ರೈಸ್’ ಎಂಬ ಹೆಸರಿನ ಟೆಲಿಗ್ರಾಮ್ ಗ್ರೂಪ ಅನ್ನು ಅಕ್ಟೋಬರ್ನಲ್ಲಿ ರಚಿಸಿದ್ದರು. ವಿವಿಧ ಕಾಲೇಜುಗಳ 981 ಸದಸ್ಯರನ್ನು ಹೊಂದಿರುವ ಈ ಬಳಗದಲ್ಲಿ ಎನ್ಐಟಿಕೆ ವಿದ್ಯಾರ್ಥಿಗಳೇ ಹೆಚ್ಚಾಗಿ ಸದಸ್ಯರಾಗಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಈ ಬಳಗದ ಸದಸ್ಯರಾಗಿದ್ದ ಮೂರನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಹಾಗೂ ಅವರ ಸಹಪಾಠಿಗಳು 2022ರ ಜೂನ್ 26ರಿಂದ 2023ರ ಜ.3ರವರೆಗೆ ಹಂತ ಹಂತವಾಗಿ ಒಟ್ಟು 27.96 ಲಕ್ಷ ಮೊತ್ತವನ್ನು ಯುಪಿಐ ಮತ್ತು ಐಎಂಪಿಎಸ್ ಮೂಲಕ ಆರೋಪಿರ ಎಸ್ಬಿಐ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ಸದಸ್ಯರ ವಿಶ್ವಾಸ ಗಳಿಸಲು ಆರೋಪಿಯು ಆರಂಭದಲ್ಲಿ ಒಂದು ತಿಂಗಳು ಹೂಡಿಕೆ ಮೊತ್ತಕ್ಕೆ ಅನುಗುಣವಾಗಿ ಲಾಭಾಂಶವನ್ನು ನೀಡಿದ್ದ. ನಂತರ ಲಾಭಾಂಶ ನೀಡುವುದನ್ನು ನಿಲ್ಲಿಸಿದ್ದ. ಹೂಡಿಕೆ ಮಾಡಿದ ಮೊತ್ತವನ್ನೂ ಮರಳಿಸಿಲ್ಲ. ಈ ಬಗ್ಗೆ ವಿಚಾರಿಸಿದಾಗ ಸಮಂಜಸವಲ್ಲದ ಕಾರಣ ನೀಡಿದ್ದ. 2023 ಮಾರ್ಚ್ ತಿಂಗಳಿಗೆ ಮುನ್ನವೇ ಹೂಡಿಕೆ ಮೊತ್ತವನ್ನು ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದರು. ಈ ಬಗ್ಗೆ ವಿದ್ಯಾರ್ಥಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.