ಮಂಗಳೂರು: ದೇವಸ್ಥಾನದ ಗರ್ಭಗುಡಿಯ ಒಳಗೆ ದೇವರ ಮೂರ್ತಿ ಇರುತ್ತದೆ. ಆದರೆ ಸಾನಿಧ್ಯವೆಂಬ ದೇವಾಲಯದಲ್ಲಿ ಸಾಕ್ಷಾತ್ ದೇವರೇ ಇದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಹೇಳಿದರು.
ಇಲ್ಲಿನ ಶಕ್ತಿನಗರದ ಸಾನಿಧ್ಯ ವಸತಿಯುತ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಓಣಂ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಈ ವಿಶೇಷ ಮಕ್ಕಳೇ ದೇವರು. ದೇವರನ್ನು ಹತ್ತು ಹಲವಾರು ಹೆಸರುಗಳಲ್ಲಿ ಕರೆಯುತ್ತಾರೆ. ಆದರೆ ನನಗೆ ಈ ಚಿಣ್ಣರೇ ದೇವರಂತೆ ಕಾಣುತ್ತಿದ್ದಾರೆ. ಇವರನ್ನು ಕಂಡು ಭಾವಪರವಶನಾಗಿದ್ದೇನೆ. ನನಗೆ ಮಾತನಾಡಲು ಮಾತೇ ಬಾರದ ಪರಿಸ್ಥಿತಿಯಾಗಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾನಿಧ್ಯದ ವಿಶೇಷ ಮಕ್ಕಳು, ಶಿಕ್ಷಕರ ನೆರವಿನಿಂದ ರಚಿಸಿದ ಪೂಕಳಂನಲ್ಲಿ ಇರಿಸಲಾದ ದೀಪವನ್ನು ಡಾ. ಹರ್ಷ ಪ್ರಜ್ವಲನೆ ಮಾಡಿದರು. ಟ್ರಸ್ಟಿನ ಗೌರವ ಸಲಹೆಗಾರ್ತಿ ಶಾಲಿನಿ ಪಂಡಿತ್, ಉಪಾಧ್ಯಕ್ಷ ದೇವದತ್ತ ರಾವ್, ಖಜಾಂಚಿ ಜಗದೀಶ್ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರೊ.ರಾಧಾಕೃಷ್ಣ, ಟ್ರಸ್ಟಿಗಳಾದ ಮೊಹಮ್ಮದ್ ಬಶೀರ್, ನಂದಕುಮಾರ್, ದಿವ್ಯಾ ಬಾಳಿಗ ವೇದಿಕೆಯಲ್ಲಿದ್ದರು. ಸಾನಿಧ್ಯದ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಸ್ವಾಗತಿದರು. ಪ್ರಾಂಶುಪಾಲೆ ಮೀನಾಕ್ಷಿ ಎಂ.ಕೆ. ವಂದಿಸಿದರು. ಶಿಕ್ಷಕಿ ಸ್ಮಿತಾ ನಿರೂಪಿಸಿದರು. ವಿಶೇಷ ಮಕ್ಕಳಿಂದ ಸಾಂಪ್ರದಾಯಿಕ ನೃತ್ಯ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.