ಮಂಗಳೂರು: ಉಳ್ಳಾಲ ಸಮೀಪದ ಕುಂಪಲ ಶ್ರೀಬಾಲಕೃಷ್ಣ ಮಂದಿರ 25 ವರ್ಷಗಳನ್ನು ಪೂರೈಸುತ್ತಿದ್ದು, ಇದರ ಅಂಗವಾಗಿ ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಲಾಗಿದೆ. ಆ.18ರಂದು ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ನಡೆಯಲಿದೆ ಎಂದು ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಕುಂಪಲಾಷ್ಟಮಿ-2022’ ಅನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಲಾಗುವುದು. ಗಣಹೋಮ, ಹನುಮಾನ್ ನಗರದಿಂದ ಮಂಗಳ ಕಲಶದ ಮೆರವಣಿಗೆ, ಗಣ್ಯರಿಂದ ನಂದಾ ದೀಪ ಪ್ರಜ್ವಲನೆ, ಶ್ರೀಕೃಷ್ಣ ದೇವರ ಉತ್ಸವ ಮೂರ್ತಿಯ ಪ್ರತಿಷ್ಠೆ, ಭಜನಾ ಮಂಡಳಿಗಳಿಂದ ಭಜನೆ, ಮಾಹಪೂಜೆ, ಧಾರ್ಮಿಕ ಸಭಾ ನಡೆಯಲಿದೆ ಎಂದರು.
ಸಂಸ್ಥೆಗೆ ಸಹಕಾರ ನೀಡಿದ ಕುಂಪಲದ 30ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಗೆ ಸನ್ಮಾನ, ಮುದ್ದು ಕೃಷ್ಣ, ಯಶೋದೆ ಕೃಷ್ಣ ಛಾಯಾಚಿತ್ರ ಸ್ಪರ್ಧೆ, ವಿಜೇತರಿಗೆ ಬಹುಮಾನ ವಿತರಣೆ, ಮಧ್ಯಾಹ್ನ 4ಕ್ಕೆ ದೇವರ ವೈಭವದ ಶೋಭಾ ಯಾತ್ರೆ ನಡೆಯಲಿದೆ. ಶೋಭಾ ಯಾತ್ರೆಯಲ್ಲಿ 30ಕ್ಕೂ ಹೆಚ್ಚು ಭಜನಾ ತಂಡಗಳು, ರೂಪಕಗಳು, ಬ್ಯಾಂಡ್ ವಾದನ, ಚೆಂಡೆವಾದನ, ಹುಲಿವೇಷ, ಇರಲಿವೆ. ಸಂಜೆ 7ಕ್ಕೆ ಕುಂಪಲ ಶಾಲಾ ಮೈದಾನದಲ್ಲಿ ಯುವ ಮರಾಠ ಕುಂಪಲ
ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸುವರು. ‘ಬಿರುವೆರ್ ಕುಡ್ಲ’ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಅಧ್ಯಕ್ಷತೆ ವಹಿಸುವರು. ಉದ್ಯಮಿಗಳಾದ ಸತೀಶ್ ಮುಚ್ಚೂರು, ವಿಜೇಶ್ ನಾಯ್ಕ್ ನಡಿಗುತ್ತು ನಾರ್ಯ, ಮೋಹನ್ ಮೆಂಡನ್, ಮನೋಹರ್, ವರದರಾಜ್, ಸುಮಿತ್ ರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಉತ್ಸವ ಸಮಿತಿ ಅಧ್ಯಕ್ಷ ಪ್ರಹ್ಲಾದ್ ಕುಮಾರ್ ಇಂದಾಜೆ, ಸಂಘಟನಾ ಕಾರ್ಯದರ್ಶಿ ಪ್ರವೀಣ್ ಎಸ್. ಕುಂಪಲ, ಉಪಾಧ್ಯಕ್ಷ ಮಾಧವ ಬಂಗೇರ, ಪ್ರಧಾನ ಕಾರ್ಯದರ್ಶಿ ಹರೀಶ್ ಮೂರುಕಟ್ಟೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.