ಮಂಗಳೂರು: ಹುಲಿವೇಷ ಆಡಂಬರವಲ್ಲ, ಬದಲಾಗಿ ಅದು ತುಳುನಾಡಿನ ಸಂಸ್ಕೃತಿ. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ಸರಳ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ದೇವರ ಸೇವೆಗೆ ಹುಲಿವೇಷ ತಂಡಗಳು ನಿರ್ಧರಿಸಿವೆ. ಸಾಂಕೇತಿಕವಾಗಿ ಹುಲಿ ವೇಷ ಕುಣಿತಕ್ಕೆ ಅವಕಾಶ ನೀಡಬೇಕು ಎಂದು ಮಂಗಳಾದೇವಿ ದಸರಾ ಶೋಭಾಯಾತ್ರೆ ಸಮಿತಿ ಒತ್ತಾಯಿಸಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ದಿಲ್ರಾಜ್ ಆಳ್ವ, ‘ಕೋವಿಡ್ ಹಿನ್ನೆಲೆಯಲ್ಲಿ ಹುಲಿವೇಷ ಕುಣಿತಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ. ಮಂಗಳಾದೇವಿ ದೇವಸ್ಥಾನ ಹಾಗೂ ಮಾರಿಯಮ್ಮ ದೇವಸ್ಥಾನದ ಶೋಭಾಯಾತ್ರೆ ಸಮಿತಿಯು ಈಗಾಗಲೇ ರಥೋತ್ಸವದಂದು ಭಾಗವಹಿಸುವ ಹುಲಿವೇಷ ತಂಡಗಳ ಪ್ರಮುಖರ ಸಭೆ ಕರೆದು ಸಾಂಕೇತಿಕವಾಗಿ ಸರಳ ರೀತಿಯಲ್ಲಿ ಆಚರಣೆಗೆ ಅವಕಾಶಕ್ಕೆ ಆಗ್ರಹಿಸಿವೆ’ ಎಂದರು.
ಸಮಿತಿಯ ಉಪಾಧ್ಯಕ್ಷ ದಿನೇಶ್ ಕುಂಪಲ ಮಾತನಾಡಿ, ‘ಈ ಬಾರಿಯ ದಸರಾದಲ್ಲಿ ಹುಲಿವೇಷ ಕೇವಲ ಹರಕೆ ರೂಪದಲ್ಲಿ ಮಾತ್ರವೇ ನಡೆಯಲಿದೆ. ಯಾವುದೇ ರೀತಿಯಲ್ಲಿ ಆದಾಯ ಗಳಿಸುವ, ಮನರಂಜನೆಯ ಉದ್ದೇಶಕ್ಕಾಗಿ ಇರುವುದಿಲ್ಲ ಎಂಬುದನ್ನೂ ತಂಡಗಳು ತೀರ್ಮಾನಿಸಿವೆ. ನವರಾತ್ರಿಯ ಮೆರವಣಿಗೆಯಲ್ಲಿ ಹುಲಿವೇಷಧಾರಿಗಳು ನರ್ತನ ಮಾಡುವುದು ಇಲ್ಲಿನ ಸಂಪ್ರದಾಯ’ ಎಂದು ತಿಳಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಶೆಟ್ಟಿ, ಉಪಾಧ್ಯಕ್ಷ ಹನೀಷ್ ಎನ್. ಬೋಳಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.