ADVERTISEMENT

ತುಳು ಲಿಪಿ ಮಾನ್ಯತೆ ಪಡೆಯುವಲ್ಲಿ ದಿಟ್ಟ ಹೆಜ್ಜೆ: ಕತ್ತಲ್‌ಸಾರ್

ಯುನಿಕೋಡ್‌ ನಕಾಶೆ ಪಟ್ಟಿಗೆ ತುಳು ಭಾಷೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 4:38 IST
Last Updated 22 ಜುಲೈ 2021, 4:38 IST
ಪತ್ರಿಕಾಗೋಷ್ಠಿಯಲ್ಲಿ ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌ ಮಾತನಾಡಿದರು.   

ಮಂಗಳೂರು: ತುಳು ಲಿಪಿಯನ್ನು ಸೂಕ್ತವಾಗಿ ಯುನಿಕೋಡ್‌ ನಕಾಶೆ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಅಕಾಡೆಮಿಗೆ ಸೂಚನೆ ನೀಡಿದ್ದು, ಈ ಮೂಲಕ ಅಂತರ ರಾಷ್ಟ್ರೀಯ ಮಟ್ಟದಲ್ಲಿ ತುಳು ಭಾಷೆಗೆ ಮಾನ್ಯತೆ ಪಡೆಯುವಲ್ಲಿ ದಿಟ್ಟ ಹೆಜ್ಜೆ ಇಟ್ಟಂತಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕ್ರಿಯೆಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ತುಳು ಲಿಪಿಯನ್ನು ಯುನಿಕೋಡ್‌ಗೆ ಸೇರ್ಪಡೆ ಕಾರ್ಯವನ್ನು ಅಕಾಡೆಮಿಯ ಹಿಂದಿನ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಅವರ ಅವಧಿಯಲ್ಲಿ ತಂತ್ರಜ್ಞಾನ ತಜ್ಞ ಪವನಜ ಮೂಲಕ ಆರಂಭಿಸಲಾಗಿತ್ತು. ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ ಕೂಡ ಪ್ರಯತ್ನ ನಡೆಸಿದ್ದರು. ಈ ಅವಧಿಯಲ್ಲಿ ವೇಗ ನೀಡಲಾಯಿತು. ಹಲವು ಸಂಘ ಸಂಸ್ಥೆಗಳು, ಹಲವು ವಿಶ್ವವಿದ್ಯಾಲಯಗಳ ಪಠ್ಯಗಳ ಮೂಲಕ, 2ಸಾವಿರ ವರ್ಷಗಳ ಇತಿಹಾಸವಿರುವ ತುಳುವಿನ ಮೌಲ್ಯ, ಅಗಾಧತೆಯನ್ನು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಡಲಾಗಿದೆ ಎಂದು ವಿವರಿಸಿದರು.

ADVERTISEMENT

ತುಳು ಕಲಿಸುವವರ ನಡುವಿನ ಗೊಂದಲವನ್ನು ಅಕಾಡೆಮಿ ವತಿಯಿಂದ ಬಗೆಹರಿಸಲಾಗಿದೆ. ಶಾಲೆಗಳಲ್ಲಿ ಸದ್ಯ
ತೃತೀಯ ಐಚ್ಛಿಕ ಭಾಷೆಯಾಗಿ ತುಳುವನ್ನು ಕಲಿಸಲಾಗುತ್ತಿದೆ. ಜಿಲ್ಲೆಯಲ್ಲಿ 250 ಶಾಲೆಗಳಿದ್ದು, ಕೇವಲ 53 ಶಾಲೆಗಳಲ್ಲಿ ಮಾತ್ರವೇ ಅನುಷ್ಠಾನವಾಗಿದೆ. ಎಲ್ಲ ಶಾಲೆಗಳಲ್ಲಿ 1 ನೇ ತರಗತಿಯಿಂದಲೇ ತುಳು ಕಲಿಕೆ ಆರಂಭವಾಗಬೇಕು. ತುಳುವರು ತಮ್ಮ ಮಾತೃ ಭಾಷೆಯಾಗಿ ತುಳುವನ್ನೇ ಅಧಿಕೃತವಾಗಿ ಶಾಲಾ ಹಂತದಲ್ಲೇ ನೋಂದಣಿ ಮಾಡಬೇಕು ಎಂದು ಸಲಹೆ ನೀಡಿದರು.

ಸದಸ್ಯ ಡಾ. ಆಕಾಶ್ ರಾಜ್ ಜೈನ್ ಸದಸ್ಯರಾದ ಶಶಿಧರ ಶೆಟ್ಟಿ, ನಾಗೇಶ್ ಕುಲಾಲ್, ರಿಜಿಸ್ಟ್ರಾರ್ ಕವಿತಾ ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.