ಉಪ್ಪಿನಂಗಡಿ: ಇಲ್ಲಿ ಹರಿಯುವ ಕುಮಾರಧಾರಾ ಮತ್ತು ನೇತ್ರಾವತಿ ಎರಡೂ ನದಿಯಲ್ಲಿ ನೀರು ಮತ್ತೆ ಹೆಚ್ಚಳವಾಗಿದ್ದು, ಮಂಗಳವಾರ ಸಂಜೆಯ ಹೊತ್ತಿಗೆ ಎರಡೂ ನದಿ ಪ್ರವಾಹದ ರೀತಿಯಲ್ಲಿ ಉಕ್ಕಿ ಹರಿಯಲಾರಂಭಿಸಿರುವುದು ಕಂಡು ಬಂದಿದೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಉಪ್ಪಿನಂಗಡಿಯಲ್ಲಿ ಭಾನುವಾರ 8 ಸೆಂ.ಮೀ., ಸೋಮವಾರ-17 ಸೆಂ.ಮೀ. ಮಂಗಳವಾರ 10 ಸೆಂ.ಮೀ. ಮಳೆ ಸುರಿದಿರುವುದು ದಾಖಲಾಗಿದೆ. ಭಾನುವಾರ ಬೆಳಿಗ್ಗೆಯಿಂದಲೇ ಒಂದೇ ಸಮನೆ ಮಳೆ ಸುರಿಯುತ್ತಿದ್ದು, ನಟ್ಟಿಬೈಲ್, ಕುರ್ಪಲು, ನೆಕ್ಕಿಲಾಡಿ, ಕೂಟೇಲು, ದಡ್ಡು ಮೊದಲಾದ ಕಡೆಯ ತಗ್ಗು ಪ್ರದೇಶಗಳು ಜಲಾವೃತವಾಗಿವೆ.
ಭಾನುವಾರ ತಡ ರಾತ್ರಿಯ ತನಕ ನದಿ ಸಮುದ್ರ ಮಟ್ಟಕ್ಕಿಂತ 27.5 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದುದು, ಸೋಮವಾರ ನದಿಯಲ್ಲಿ ನೀರಿನ ಪ್ರವಾಹ ಕಡಿಮೆಯಾಗಿತ್ತು. ಮಂಗಳವಾರ ಬೆಳಿಗ್ಗಿನಿಂದ ಮತ್ತೆ ಏರಿಕೆ ಆಗತೊಡಗಿದ್ದು, ಮಂಗಳವಾರ ಸಂಜೆಯ ಹೊತ್ತಿಗೆ ನದಿ ಸಮುದ್ರ ಮಟ್ಟದಿಂದ 27.8 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದುದು ಕಂಡು ಬಂದಿದೆ. ನೇತ್ರಾವತಿ ಮತ್ತು ಕುಮಾರಧಾರಾ ಎರಡೂ ನದಿಯಲ್ಲಿ ಒಂದೇ ರೀತಿಯಲ್ಲಿ ನೀರು ಏರಿಕೆಯಾಗಿದೆ. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಳದ ಬಳಿಯ ಸಂಗಮ ಕ್ಷೇತ್ರದ ಸ್ಥಾನಘಟ್ಟದ 36 ಮೆಟ್ಟಲುಗಳ ಪೈಕಿ 23 ಮೆಟ್ಟಲು ಮುಳುಗಡೆಯಾಗಿದೆ. 13 ಮೆಟ್ಟಲು ಕಾಣುತ್ತಿದೆ.
ಕಂದಾಯ ಅಧಿಕಾರಿಗಳು ಮೊಕ್ಕಾಂ:
ನದಿಯಲ್ಲಿ ಪ್ರವಾಹ ದಿನೇ ದಿನೇ ಜಾಸ್ತಿಯಾಗುತ್ತಿದ್ದು, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದ್ದು, ಕಂದಾಯ ಇಲಾಖೆಯ ಸಿಬ್ಬಂದಿಗಳು ಸನ್ನದ್ಧರಾಗಿ ಕೇಂದ್ರ ಸ್ಥಾನದಲ್ಲಿ ಮೊಕ್ಕಾಂ ಇರುವುದಾಗಿ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ್ ತಿಳಿಸಿದ್ದಾರೆ.
ನೇತ್ರಾವತಿ, ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡ ಮೊಕ್ಕಾಂ ಹೂಡಿದ್ದು, ಸಂಭವನೀಯ ಸಮಸ್ಯೆಗಳನ್ನು ಎದುರಿಸಲು ಸನ್ನದ್ದವಾಗಿ ನಿಂತಿದೆ ಎಂದು ಗೃಹರಕ್ಷಕ ದಳದ ದಿನೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.