ADVERTISEMENT

ಪರಿಹಾರಕ್ಕಾಗಿ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 6:59 IST
Last Updated 24 ನವೆಂಬರ್ 2017, 6:59 IST

ದಾವಣಗೆರೆ: ಆತ್ಮಹತ್ಯೆ ಪ್ರಕರಣದಲ್ಲಿ ಪರಿಹಾರಕ್ಕೆ ಆಗ್ರಹಿಸಿ ಹರಿಹರ ತಾಲ್ಲೂಕು ಗಂಗನರಸಿ ರೈತ ಕುಟುಂಬ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಿತು.

ಆತ್ಮಹತ್ಯೆ ಮಾಡಿಕೊಂಡ ರೈತ ನಾಗರಾಜ ಅವರ ಪತ್ನಿ ನೇತ್ರಾವತಿ ಈ ಸಂದರ್ಭ ಮಾತನಾಡಿ, ‘ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ನನ್ನ ಗಂಡನ
ಸಾವು ರೈತ ಆತ್ಮಹತ್ಯೆ ಪ್ರಕರಣದಲ್ಲಿ ದಾಖಲಾಗಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸರ್ಕಾರದ ಅವೈಜ್ಞಾನಿಕ ನೀತಿಯಿಂದ ಇದುವರೆಗೂ ಪರಿಹಾರ ಸೌಲಭ್ಯ ಸಿಕ್ಕಿಲ್ಲ’ ಎಂದು ದೂರಿದರು.

‘ನಾವು ಸಣ್ಣ ರೈತರು. ನನ್ನ ಗಂಡನ ತಂದೆ ಹೆಸರಿಗೆ 1ಎಕರೆ 6 ಗುಂಟೆ ಜಮೀನು ಇದ್ದು, ಅವರಿಗೆ 3 ಗಂಡುಮಕ್ಕಳಿದ್ದಾರೆ. ನನ್ನ ಗಂಡ ಹಿರಿಯರಾಗಿದ್ದು, ಮನೆಯ ಎಲ್ಲಾ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು. ಅವರಿಗೆ ವಿವಿಧೆಡೆ ಸುಮಾರು ₹ 10ಲಕ್ಷ ಸಾಲ ಮಾಡಿದ್ದರು. ಬೆಳೆ ನಷ್ಟದಿಂದ ಸಾಲ ತೀರಿಸಲಾಗಿದೆ ನೊಂದು ಇದೇ ಜೂನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು’ ಎಂದು ಪ್ರಕರಣ ವಿವರಿಸಿದರು.

ADVERTISEMENT

‘ಹರಿಹರ ಗ್ರಾಮಾಂತರ ಠಾಣೆಯಲ್ಲಿ ಇದು ಆತ್ಮಹತ್ಯೆ ಪ್ರಕರಣ ಎಂದು ದಾಖಲಾಗಿದೆ. ಸರ್ಕಾರದಿಂದ ₹ 5ಲಕ್ಷ ಪರಿಹಾರ, ₹ 2 ಸಾವಿರ ವಿಧವಾ ಮಾಶಾಸನ ಇದುವರೆಗೂ ಸಿಕ್ಕಿಲ್ಲ. ಕುಟುಂಬ ನಿರ್ವಹಣೆ ನನಗೆ ಕಷ್ಟವಾಗುತ್ತಿದೆ. ಅಧಿಕಾರಿಗಳು ಆದಷ್ಟು ಬೇಗ ಪರಿಹಾರ ಕೊಡಿಸಬೇಕು’ ಎಂದು ಒತ್ತಾಯಿಸಿದರು.

ರೈತ ಕುಟುಂಬಕ್ಕೆ ಬೆಂಬಲ ವ್ಯಕ್ತಪಡಿಸಿ ರಾಜ್ಯ ರೈತ ಸಂಘದ ಹರಿಹರ ಮುಖಂಡ ರವಿ ಪಟೇಲ್ ಅವರೂ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.