ADVERTISEMENT

ಬೆಳೆ ವಿಮೆ: ಕಂತು ಕಟ್ಟಲು 30 ಕೊನೆ ದಿನ

ಬೆಳೆ ಸಾಲ ಪಡೆದವರಿಗೆ ಕಡ್ಡಾಯ; ಜಿಲ್ಲೆಯಲ್ಲಿ ಏಳು ಬೆಳೆಗೆ ವಿಮೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2016, 9:58 IST
Last Updated 18 ಜೂನ್ 2016, 9:58 IST

ದಾವಣಗೆರೆ: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ರೈತರು ಜೂನ್ 30ರ ಒಳಗೆ ಕಂತು ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಟಿ. ಅಂಜನ್‌ಕುಮಾರ್ ತಿಳಿಸಿದ್ದಾರೆ.

2016–17ನೇ ಸಾಲಿನಲ್ಲಿ 2016ರ ಮುಂಗಾರು ಹಂಗಾಮಿಗೆ ಗ್ರಾಮ ಪಂಚಾಯ್ತಿ ಮಟ್ಟಕ್ಕೆ ಈ ಯೋಜನೆಯನ್ನು ಜಾರಿಗೊಳಿ ಸಲಾಗುತ್ತಿದೆ. ಫಸಲು ಕೊಡುತ್ತಿರುವ ಅಡಿಕೆ, ಮಾವು, ವೀಳ್ಯದೆಲೆ, ದಾಳಿಂಬೆ ಹಾಗೂ ಬೆಳೆಯಲು ಉದ್ದೇಶಿಸಿರುವ ಕಂದುಬಾಳೆ, ಮಳೆಯಾಧಾರಿತ ಹಸಿಮೆಣಸಿನಕಾಯಿ, ನೀರಾವರಿ ಹಸಿಮೆಣಸಿನಕಾಯಿ ಬೆಳೆಗಳನ್ನು ವಿಮೆ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳೆಗಳಿಗೆ ಸಾಲ ಪಡೆಯುವ ರೈತರನ್ನು ಕಡ್ಡಾಯವಾಗಿ ಬೆಳೆ ವಿಮೆಗೆ ಒಳಪಡಿಸಬೇಕಾಗಿದ್ದು, ಬೆಳೆ ಸಾಲ ಪಡೆಯದ ರೈತರಿಗೆ ಇದು ಐಚ್ಛಿಕ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ನಷ್ಟ ಪರಿಹಾರ ಅಂದಾಜಿಸಲು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಸಂಬಂಧಿಸಿದ ಕ್ಷೇತ್ರ ಘಟಕಗಳಲ್ಲಿ ಸ್ಥಾಪಿಸಿರುವ ಮಳೆಮಾಪನ ಹಾಗೂ ಹವಾಮಾನ ಕೇಂದ್ರಗಳಲ್ಲಿ ದಾಖಲಾದ ಮಾಹಿತಿಯನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು.

ಪರಿಹಾರದ ಮೊತ್ತ ನೀಡಲು ಅಧಿಸೂಚಿಸಲಾದ ಕಡಿಮೆ ಮಳೆ, ಅಧಿಕ ಮಳೆ, ಅಧಿಕ ಆರ್ದ್ರತೆ, ಅತಿಯಾದ ಗಾಳಿಯ ವೇಗ ಹಾಗೂ ಪ್ರಮುಖ ರೋಗಗಳನ್ನು ಪರಿಗಣಿಸಲಾಗುವುದು. ಅಧಿಸೂಚಿತ ಘಟಕದಲ್ಲಿ ವಿಮೆಗೆ ಒಳಪಟ್ಟ ಎಲ್ಲಾ ರೈತರಿಗೆ ವಿಮಾ ನಷ್ಟ ಪರಿಹಾರ ನೀಡಲಾಗುವುದು.

ಸ್ಥಳ ನಿರ್ದಿಷ್ಟ  ವಿಕೋಪಗಳಾದ ಆಲಿಕಲ್ಲು ಬಿರುಗಾಳಿ ಸಹಿತ ಮಳೆ, ಮೇಘ ಸ್ಫೋಟಗಳಿಂದ ಬೆಳೆ ನಷ್ಟ ವಾದಲ್ಲಿ, ವಿಮೆ ಮಾಡಿಸಿದ ರೈತರು ಸಂಬಂಧಪಟ್ಟ ಹಣಕಾಸು ಸಂಸ್ಥೆ, ವಿಮಾ ಸಂಸ್ಥೆಗಳ ಕಚೇರಿಗಳಿಗೆ 48 ಗಂಟೆಯ ಒಳಗೆ ಮಾಹಿತಿ ತಿಳಿಸಬೇಕು. ಸಂಬಂಧಪಟ್ಟ ವಿಮಾ ಸಂಸ್ಥೆಗಳು ನಷ್ಟ ಪ್ರಮಾಣದ ನಿರ್ಧಾರವನ್ನು ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿ, ಸಿಬ್ಬಂದಿ ನೆರವಿನೊಂದಿಗೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಗೆ ಸರ್ಕಾರವು ಯೂನಿವರ್ಸಲ್ ಸೋಂಪು ಇನ್ಶೂರೆನ್ಸ್‌ ಕಂಪೆನಿ ಲಿಮಿಟೆಡ್‌ನ್ನು ವಿಮಾ ಸಂಸ್ಥೆಯನ್ನಾಗಿ ಆಯ್ಕೆ ಮಾಡಿದೆ. ಆಸಕ್ತ ರೈತರು ಸಮೀಪದ ಬ್ಯಾಂಕ್‌ ಶಾಖೆ, ಗ್ರಾಮ ಪಂಚಾಯ್ತಿ ಕಚೇರಿ, ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾ ಖೆಯ ಕಚೇರಿ ಸಂಪರ್ಕಿಸಬಹುದು. ವಿವರಗಳಿಗೆ ವೆಬ್‌ಸೈಟ್‌: www.samrakshane.karnataka.gov.in

ಬೆಳೆ ವಿಮೆ ಮಾಹಿತಿ: ಬೆಳೆ ವಿಮೆಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ತಲಾ ಶೇ 50ರಷ್ಟು ವಂತಿಗೆ ನೀಡಲಿವೆ. ಅಡಿಕೆಗೆ ₹ 3,560, ಕಂದುಬಾಳೆಗೆ ₹1,780, ದಾಳಿಂಬೆಗೆ ₹1,755, ವೀಳ್ಯೆದೆಲೆಗೆ ₹5,060, ಮಾವಿಗೆ ₹733, ಮಾಳೆಯಾಶ್ರಿತ ಹಸಿ ಮೆಣಸಿನಕಾಯಿ ₹1,943 ಹಾಗೂ ನೀರಾವರಿ ಹಸಿ ಮೆಣಸಿನಕಾಯಿಗೆ ₹2,693 ವಂತಿಕೆ ನೀಡಲಿವೆ.

ರೈತರು ಪ್ರತಿ ಹೆಕ್ಟೇರ್‌ಗೆ ಕಟ್ಟಬೇಕಾದ ವಿಮಾ ಕಂತು ಈ ರೀತಿ ಇದೆ. ಅಡಿಕೆಗೆ ₹ 12,120, ಕಂದುಬಾಳೆಗೆ ₹6,060, ದಾಳಿಂಬೆಗೆ ₹9,135, ವೀಳ್ಯದೆಲೆಗೆ ₹15,120, ಮಾವುಗೆ ₹3,816, ಮಾಳೆಯಾಶ್ರಿತ ಹಸಿ ಮೆಣಸಿನಕಾಯಿ ₹6,592 ಹಾಗೂ ನೀರಾವರಿ ಹಸಿ ಮೆಣಸಿನಕಾಯಿಗೆ ₹9,136 ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.