ADVERTISEMENT

ಭದ್ರಾ ನಾಲೆ: ಜ.20ಕ್ಕೆ ನೀರು ಬಿಡುಗಡೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 5:12 IST
Last Updated 26 ಡಿಸೆಂಬರ್ 2012, 5:12 IST

ಮಲೇಬೆನ್ನೂರು: ಬೇಸಗೆ ಹಂಗಾಮಿಗೆ ಜ. 20ರಿಂದ ನೀರು ಹರಿಸಲು ಡಿ. 29 ರಂದು ಶಿವಮೊಗ್ಗದಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ ತೀರ್ಮಾನ ತೆಗೆದಕೊಳ್ಳುವಂತೆ ಒತ್ತಾಯಿಸಿದರು.

ಇಲ್ಲಿನ ಕರ್ನಾಟಕ ನೀರಾವರಿ ನಿಗಮದ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರ ಸಮಾಲೋಚನಾ ಸಭೆಯಲ್ಲಿ ತೆಗೆದುಕೊಂಡ 3 ನಿರ್ಧಾರಗಳನ್ನು ರೈತ ಸಮುದಾಯ 2 ಕೈಎತ್ತುವ ಮೂಲಕ ಅನುಮೋದಿಸಿದರು.
ಜಲಾಶಯದ ವ್ಯಾಪ್ತಿಯ ಎಲ್ಲ ವಿಭಾಗದಲ್ಲಿ ಆಂತರಿಕ ಸರದಿ ಅನುಷ್ಟಾನ ಹಾಗೂ ಹಂಗಾಮಿಗೆ ಸತತವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜೆ. ಮಂಜುನಾಥ್ ಪ್ರಾಸ್ತಾವಿಕವಾಗಿ ಸಭೆ ಹಮ್ಮಿಕೊಂಡ ಉದ್ದೇಶ ತಿಳಿಸಿದರು.
ನಾಲೆ ಆಧುನೀಕರಣವಾಗದೆ ಇದ್ದ ವೇಳೆ 120 ದಿನ ನಾಲೆಯಲ್ಲಿ ನೀರು ಹರಿಸಲಾಗಿದೆ. ನಾಲೆ ಆಧುನೀಕರಣವಾಗಿದೆ, ನೀರು ಹರಿಸಲು ಯಾವುದೇ ಸಮಸ್ಯೆ ಇಲ್ಲ. ಮೇಲ್ಭಾಗದವರ ಕ್ಯಾತೆಗೆ ಅರ್ಥವಿಲ್ಲ. ಜಲಾಶಯದ ನಾಲೆ ಬಾಗಿಲು ತೆರೆದರೆ ನೀರು ಸಿಗುತ್ತದೆ. ಅಲ್ಲಿ ಯಾವುದೇ ಸಮಸ್ಯೆ ಇಲ್ಲ.

ಕೈಗಾರಿಕೆಗಳಿಗೆ ನೀರು ಹರಿಸುವುದರಲ್ಲಿ ಅರ್ಥವಿಲ್ಲ. ರೈತರ ಜಮೀನಿಗೆ ನೀರು ಕೊಟ್ಟರೆ ಆಹಾರ ಸಮಸ್ಯೆ ನೀಗುತ್ತದೆ. ಅನಗತ್ಯವಾಗಿ ಕುಡಿಯುವ ನೀರಿನ ನೆಪಲ್ಲಿ ನದಿಗೆ ನೀರು ಹರಿಸುವ ಪ್ದ್ದದತಿ ನಿಲ್ಲಬೇಕು. ಕುಡಿಯುವ ನೀರಿಗೆ 2 ಟಿಎಂಸಿ ಸಾಕು. ಕೊನೆಭಾಗದವರಿಗೂ ನೀರು ತಲುಪಿಸಿ.

ದೇವರಬೆಳಕೆರೆ ಪಿಕಪ್ ಹೂಳು ಎತ್ತಿಸಿ ಎಂಬ ಸಲಹೆಗಳನ್ನು ಜಿ.ಪಂ. ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ ರಾಜಣ್ಣ,ತಾ.ಪಂ. ಅಧ್ಯಕ್ಷೆ ವಿಜಯಲತಾ, ಉಪಾಧ್ಯಕ್ಷ ಐರಣಿ ಅಣ್ಣೇಶ್, ರೈತ ಸಂಘದ ಓಂಕಾರಪ್ಪ, ಶಿವಾಜಿ ಪಾಟೀಲ್ ನಿಟ್ಟೂರು, ಮಲ್ಲಪ್ಪ, ಯಲವಟ್ಟಿ ವ್ಯೋಮಕೇಶಪ್ಪ, ಎಪಿಎಂಸಿ ನಿರ್ದೇಶಕ ಪರಮೇಶ್ವರಪ್ಪ ಮಂಡಿಸಿದರು.

ಮಲವಗೊಪ್ಪದಲ್ಲಿ ಡಿ.29ರಂದು ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ರೈತ ಸಂಘದ ಕೆ. ಬೇವಿನಹಳ್ಳಿ ಮಹೇಶ್ ತಿಳಿಸಿದರು.
ಮಳೆಗಾಲದ ಐಸಿಸಿ ಸಭೆ ಶಿವಮೊಗ್ಗದಲ್ಲಿ, ದಾವಣಗೆರೆಯಲ್ಲಿ ಬೇಸಿಗೆ ಹಂಗಾಮಿನ ಸಭೆ ಹಮ್ಮಿಕೊಂಡರೆ ಒಳಿತು. ಶಾಸಕರು ಬಸ್‌ವ್ಯವಸ್ಥೆ ಮಾಡಿದರೆ ಹೆಚ್ಚಿನ ಸಂಖ್ಯೆ ರೈತರನ್ನು ಕರೆದೊಯ್ಯಬಹುದು. ವ್ಯವಸ್ಥೆ ಮಾಡಿ ಎಂದ ರಾಜಕೀಯದ ಚಾಟಿ ಬೀಸಿದರು.

ಐಸಿಸಿ ಸಭೆಗೆ ಈ ಭಾಗವನ್ನು ಪ್ರತಿನಿಧಿಸುವ ಇಬ್ಬರು ಮಂತ್ರಿಗಳು, ಸಂಸದರು, ಶಾಸಕರು ಭಾಗವಹಿಸದಿರುವುದು ಶೋಚನೀಯ ಸಂಗತಿ. ನೀರಿಗೆ ರಾಜಕೀಯ ಬೆರೆಸಬಾರದು. ಎಲ್ಲರೂ ಒಕ್ಕೊರಲಿನಿಂದ ಹೋರಾಡಿ ನೀರು ಪಡೆಯಲೇಬೇಕು ಮಾಜಿ ಶಾಸಕ ಎಚ್.ಎಸ್.  ಶಿವಶಂಕರ್ ಕೋರಿದರು.

ಕಷ್ಟ ನಷ್ಟಕ್ಕೆ ಹೊಣೆಗಾರರಾಗಿ ಬೇಸಿಗೆ ಬಿಸಿಲು ಎದುರಿಸಿ ಬತ್ತ ಬೆಳೆಯೋಣ. ಐಸಿಸಿ ಸಭೆ  `ಹಾವೇರಿ ಪಂಚಾಯ್ತಿ'ಯಂತೆ. ನಾಲೆಗೆ ನೀರು ಬಂದೆ ಬರುತ್ತದೆ. ಐಸಿಸಿ ಸಭೆಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸುವ ಸದಸ್ಯರಿಗೆ ಬೆಂಬಲ ನೀಡಿ. ಇಲ್ಲಿನ ಸಭೆ ತೀರ್ಮಾನವನ್ನು ಐಸಿಸಿ ಸಭೆಯಲ್ಲಿ ಮಂಡಿಸುತ್ತೇನೆ.

ರೈತರು ಎಂಜಿನಿಯರ್‌ಗಳಿಗೆ ತೊಂದರೆ ಕೊಟ್ಟರೆ  ರಜಾ ಹಾಕ್ತಾರೆ, ವರ್ಗಾವಣೆ ಮಾಡಿಸಿ ಕೊಳ್ಳುತ್ತಾರೆ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಹೋಗ್ತಾರೆ. ಸಹಕಾರ ನೀಡಿ ನೀರು ಪಡೆಯಿರಿ ಎಂದು ಸಭೆ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಪಿ. ಹರೀಶ್ ರೈತರಲ್ಲಿ ಮನವಿ ಮಾಡಿದರು.

ಎಪಿಎಂಸಿ ನಿರ್ದೇಶಕ ಜಿ. ಮಂಜುನಾಥ್, ಮೊಹ್ಮದ್ ರೋಶನ್, ಜಿ.ಪಂ. ಸದಸ್ಯ ಟಿ. ಮುಕುಂದ, ಪ್ರಭುಗೌಡ, ಬಸವರಾಜಪ್ಪ, ಶಾವಿಗೆ ಬಸಣ್ಣ, ಬಿ. ಚಿದಾನಂದಪ್ಪ, ಫಾಲಾಕ್ಷ,  ಕಾಮರಾಜ್, ಬಿ. ವೀರಣ್ಣ, ವೈ. ರಂಗನಾಥ್, ಶಂಭುಲಿಂಗಪ್ಪ, ದೊಡ್ಡಬಸಪ್ಪ, ಬಾವಿಮನೆ ಪುಟ್ಟವೀರಪ್ಪ, ಕುಬೇರಪ್ಪ, ಕಲ್ಲಕೇರ ಮಂಜಪ್ಪ, ಗುತ್ತೂರು ಮಂಜಪ್ಪ ಕಾರ್ಯಪಾಲಕ ಎಂಜಿನಿಯರ್ ಸಿ. ವಿರೂಪಕ್ಷಪ್ಪ ಇದ್ದರು.
ಕಾರ್ಯಪಾಲಕ ಎಂಜಿನಿಯರ್ ಸಿ. ವಿರೂಪಾಕ್ಷಪ್ಪ ಸ್ವಾಗತಿಸಿದರು, ಎಚ್. ಆಂಜನೇಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.